ಮುಂಬೈ: ಲಾಕ್ಡೌನ್ ಮುಗಿದು, ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಸಿಗುತ್ತಿದ್ದಂತೆಯೇ, ಅಕ್ಷಯ್ ಕುಮಾರ್ ದೂರದ ಸ್ಕಾಟ್ಲ್ಯಾಂಡ್ಗೆ ಹೋಗಿ ಸದ್ದಿಲ್ಲದೆ ‘ಬೆಲ್ ಬಾಟಮ್’ ಚಿತ್ರದ ಚಿತ್ರೀಕರಣವನ್ನು ಮುಗಿಸಿ ಬಂದಿದ್ದರು. ಅಷ್ಟೇ ಅಲ್ಲ, ಚಿತ್ರದ ಬಿಡುಗಡೆಯ ದಿನಾಂಕವನ್ನು ಸಹ ಘೋಷಿಸಿದ್ದರು.ಈಗ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ.
ಹೌದು, ‘ಬೆಲ್ ಬಾಟಮ್’ ಚಿತ್ರದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದ್ದು, ಏಪ್ರಿಲ್ 02ರಂದು ಬಿಡುಗಡೆಯಾಗಬೇಕಿದ್ದ ಚಿತ್ರವು, ಇದೀಗ ಜೂನ್ಗೆ ಹೋಗಿದೆ. ಸದ್ಯಕ್ಕೆ ಜೂನ್ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಬಿಡುಗಡೆ ಇನ್ನಷ್ಟು ಪೋಸ್ಟ್ಪೋನ್ ಆದರೆ ಆಶ್ಚರ್ಯವಿಲ್ಲ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ … ಕನ್ನಡದಲ್ಲಿ ಮಾತಾಡಿದ ಕಿಚ್ಚ
ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದು ಯಾಕೆ ಎಂದು ಅಕ್ಷಯ್ ಕುಮಾರ್ ಅಭಿಮಾನಿಗಳು ಕೇಳಬಹುದು. ಅದಕ್ಕೆ ಕಾರಣ, ಅವರದೇ ಇನ್ನೊಂದು ಚಿತ್ರ ‘ಸೂರ್ಯವಂಶಿ’. ಕಳೆದ ಮಾರ್ಚ್ನಲ್ಲೇ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್ಡೌನ್ನಿಂದಾಗಿ ಈ ಚಿತ್ರ ಇದುವರೆಗೂ ಬಿಡುಗಡೆಯಾಗಿಲ್ಲ. ಎಲ್ಲಾ ಸರಿ ಹೋದರೆ, ಮಾರ್ಚ್ನಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ಒಂದು ಪಕ್ಷ ಇದು ನಿಜವೇ ಆದರೆ, ಒಂದೇ ತಿಂಗಳ ಅಂತರದಲ್ಲಿ ಅಕ್ಷಯ್ ಕುಮಾರ್ ಅಭಿನಯದ ಎರಡು ಚಿತ್ರಗಳು
ಬಿಡುಗಡೆಯಾದಂತಾಗುತ್ತದೆ. ಮಾರ್ಚ್ನಲ್ಲಿ ‘ಸೂರ್ಯವಂಶಿ’ ಬಂದರೆ, ಏಪ್ರಿನಲ್ಲಿ ‘ಬೆಲ್ ಬಾಟಮ್’ ಬಿಡುಗಡೆಯಾದಂತಾಗುತ್ತದೆ. ಜನ ಚಿತ್ರಮಂದಿರಗಳತ್ತ ಬರುವುದಕ್ಕೆ ಯೋಚಿಸುತ್ತಿರುವ ಸಂದರ್ಭದಲ್ಲಿ, ಒಂದೇ ತಿಂಗಳ ಅಂತರದಲ್ಲಿ ಅಕ್ಷಯ್ ಕುಮಾರ್ ಅಭಿನಯದ ಎರಡು ಚಿತ್ರಗಳು ಬಿಡುಗಡೆ ಮಾಡುವುದು ಮೂರ್ಖತನ ಎಂದು ‘ಬೆಲ್ಬಾಟಮ್’ ನಿರ್ಮಾಪಕರಿಗೆ ಗೊತ್ತಿಲ್ಲದೇನಿಲ್ಲ.
ಇದನ್ನೂ ಓದಿ: ತಲ್ವಾರ್ನಿಂದ ಕೇಕ್ ಕತ್ತರಿಸಿ ಛೀಮಾರಿ ಹಾಕಿಸಿಕೊಂಡ ಸ್ಟಾರ್ ನಟ- ತಪ್ಪಿನ ಅರಿವಾಗಿ ಕ್ಷಮೆ
ಹಾಗಾಗಿ ಅವರು ಚಿತ್ರವನ್ನು ಜೂನ್ ಅಥವಾ ಜುಲೈನಲ್ಲಿ ಬಿಡುಗಡೆ ಮಾಡುವುದಕ್ಕೆ ಯೋಚಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಗೊಂದಲಮಯವಾಗಿರುವುದರಿಂದ ನಿಖರವಾದ ದಿನಾಂಕವನ್ನು ಘೋಷಿಸಿಲ್ಲ. ಇನ್ನಷ್ಟು ಸಮಯ ಕಾದುನೋಡಿ, ಒಂದು ಸ್ಪಷ್ಟ ಚಿತ್ರಣ ಸಿಕ್ಕ ನಂತರ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗುತ್ತದೆ.
‘ಬೆಲ್ ಬಾಟಮ್’ ಚಿತ್ರವನ್ನು ರಂಜಿತ್ ತಿವಾರಿ ಎನ್ನುವವರು ನಿರ್ದೇಶಿಸಿದ್ದು, ಪೂಜಾ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ವಾಶು ಭಾಗ್ನಾನಿ ಮತ್ತು ಜಾಕಿ ಭಾಗ್ನಾನಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ರೆಟ್ರೋ ಥ್ರಿಲ್ಲರ್ ಆಗಿದ್ದು ಅಕ್ಷಯ್ ಕುಮಾರ್ ಜತೆಗೆ ವಾಣಿ ಕಪೂರ್, ಲಾರಾ ದತ್ತ, ಹ್ಯೂಮಾ ಖುರೇಷಿ ಸೇರಿದಂತೆ ಹಲವರು ನಟಿಸಿದ್ದಾರೆ.