ಗಂಗಾವತಿ: ನೌಕರಿ ಮಾಡುವ ಪುರುಷರಿಗೆ ನಿವೃತ್ತಿಯಿದೆ, ಆದರೆ ಮನೆಯಲ್ಲಿ ನಿತ್ಯ ಕೆಲಸ ಮಾಡುವ ಮಹಿಳೆಗೆ ಕೊನೆಯ ದಿನದವರೆಗೂ ನಿವೃತ್ತಿ ಇಲ್ಲ ಎಂದು ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಅರ್ಚನಾ ಹಿರೇಮಠ ಹೇಳಿದರು.
ನಗರದ ಹಿರೇಜಂತಕಲ್ ಬಸವ ಭವನದಲ್ಲಿ ಬಸವ ನೀಲಾಂಬಿಕಾ ಮಹಿಳಾ ಸಂಘ ಭಾನುವಾರ ಏರ್ಪಡಿಸಿದ್ದ ಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ವೈರಾಗ್ಯನಿಧಿ ಅಕ್ಕ ಕುರಿತು ಉಪನ್ಯಾಸ ನೀಡಿದರು.
ಪುರುಷನಲ್ಲಿ ತಾಯ್ತನವಿದ್ದರೆ ಅಕ್ಕಮಹಾದೇವಿ ಅರ್ಥವಾಗುತ್ತಾಳೆ
ಪುರುಷನಲ್ಲಿ ತಾಯ್ತನವಿದ್ದರೆ ಅಕ್ಕಮಹಾದೇವಿ ಅರ್ಥವಾಗುತ್ತಾಳೆ. ಮನೆಗೆಲಸ ಮಾಡುವ ಮಹಿಳೆಯ ದುಡಿಮೆಗೆ ಬೆಲೆ ಕಟ್ಟಲಾಗಲ್ಲ. ನಾವು ನಕಾರಾತ್ಮಕ ವಿಷಯಗಳನ್ನು ಬಹುಬೇಗ ಹಿಡಿದಿಟ್ಟುಕೊಳ್ಳುತ್ತದೆ. ಧಾರಾವಾಹಿಗಳು ಮಹಿಳೆಯರ ವಿಚಾರ ಶಕ್ತಿಗಳನ್ನು ಕುಂದಿಸುತ್ತವೆ. ಆಧ್ಯಾತ್ಮಿಕ ಕಾರ್ಯಕ್ರಮಗಳು ಸ್ತ್ರೀಯರನ್ನು ಚಿಂತನೆಗೆ ಹಚ್ಚುತ್ತವೆ ಎಂದರು.
ಭಾರತೀಯ ವೈದ್ಯಕೀಯ ಸಂಘದ ಮೈತ್ರಿ ವಿಭಾಗದ ಅಧ್ಯಕ್ಷೆ ಡಾ.ಸುಲೋಚನಾ ವಿ.ಚಿನಿವಾಲರ್ ಮಾತನಾಡಿ, ಟಿವಿ ಕಾರ್ಯಕ್ರಮಗಳ ಆಯ್ಕೆಯಲ್ಲಿ ಎಚ್ಚರವಹಿಸಬೇಕಿದ್ದು, ಮನ ಅರಳಿಸುವ ಕಾರ್ಯಕ್ರಮ ವೀಕ್ಷಿಸುವಂತೆ ಸಲಹೆ ನೀಡಿದರು.ದಾಸೋಹಿಗಳಾದ ಅಶ್ವಿನಿ ರಮೇಶ ಹೊಸಮನಿ ಮತ್ತು ದೇವಮ್ಮ ಯರಡೋಣಿಯನ್ನು ಸನ್ಮಾನಿಸಲಾಯಿತು.
ಬಸವ ಕೇಂದ್ರದ ಅಧ್ಯಕ್ಷ ಕೆ.ಬಸವರಾಜ, ಮುಖಂಡರಾದ ಮಲ್ಲಯ್ಯಸ್ವಾಮಿ ಹಿರೇಮಠ, ಬೂದಿಬಸಪ್ಪ, ಜೆ.ನಾಗರಾಜ, ಬಿ.ನಾರಾಯಣಪ್ಪ, ಡಾ.ಶಶಿಕಲಾ ಶಿವಕುಮಾರ ಮಾಲಿಪಾಟೀಲ್, ಪ್ರದೀಪಗೌಡ ದೇವರಶೆಟ್ಟಿ, ಸುಮಂಗಲಾ ಬೈಚಬಾಳ, ಕವಿತಾ ಮಹೇಶಕುಮಾರ ಇತರರಿದ್ದರು.
ಗದಿಗೆಪ್ಪ ಕಾಲನಿ
ಇಲ್ಲಿನ ಗಣಪತಿ ದೇವಾಲಯ ಆವರಣದಲ್ಲಿ ಕದಳಿ ಮಹಿಳಾ ವೇದಿಕೆಯಿಂದ ಅಕ್ಕಮಹಾದೇವಿ ಜಯಂತಿ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಹಿರಿಯ ವಕೀಲ ಡಿ.ಎ.ಹಾಲಸಮುದ್ರ ಮಾತನಾಡಿ, ಮಹಿಳೆಯರನ್ನು ಗೌರವಿಸಬೇಕಿದ್ದು, ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶ ನೀಡಬೇಕಿದೆ ಎಂದರು.
ಮಹಿಳೆಯರ ಆರೋಗ್ಯ ಕಾಳಜಿ ಕುರಿತು ವೈದ್ಯೆ ರಾಧಿಕಾ ಅರಳಿ ಮಾತನಾಡಿದರು. ವೇದಿಕೆ ತಾಲೂಕಾಧ್ಯಕ್ಷೆ ಸಿ.ಮಹಾಲಕ್ಷ್ಮೀ, ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಸಿ.ಐಗೋಳ, ಎಸ್ಕೆಎನ್ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯೆ ಜಗದೇವಿ ಕಲಶೆಟ್ಟಿ, ಉಪನ್ಯಾಸಕಿ ಡಾ.ವಾಣಿಶ್ರೀ ಪಾಟೀಲ್, ಶಿಕ್ಷಕಿಯರಾದ ಮಾಲಾ ಶ್ರೀಧರ, ಶ್ರೀದೇವಿ ಕೃಷ್ಣಪ್ಪ, ವೈದ್ಯೆ ಸುಲೋಚನಾ ಚಿನಿವಾಲರ್, ಕಲಾವಿದ ರಾಜಾಸಾಬ್ ಮುದ್ದಾಬಳ್ಳಿ, ಮುಖಂಡರಾದ ಜಿ.ಶಿವಲಿಂಗಪ್ಪ, ಎಸ್.ವಿ.ಪಾಟೀಲ್ ಗುಂಡೂರು, ಸುಧಾತಾಯಿ ಬಡಿಗೇರ್, ಸಾವಿತ್ರಿ ಸೋಮಪ್ಪ ಇತರರಿದ್ದರು. ನಂತರ ಮಕ್ಕಳಿಂದ ಭರತನಾಟ್ಯ ಮತ್ತು ವಚನ ಗಾಯನ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: ಕಾಡಿನಲ್ಲಿ ‘ತ್ರಿದೇವಿ’ಯರು … ಇದು ಮೂವರು ಸಾಹಸಿ ಮಹಿಳೆಯರ ಕಥೆ