ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಭದ್ರತೆಗೆ ನಿಯೋಜಿಸಿದ್ದ ಮೂವರು ಕಮಾಂಡೋ ಹಾಗೂ ಒಬ್ಬ ಡಿಐಜಿಯನ್ನು ದೋವಲ್ ಅವರ ವಿಐಪಿ ಸೆಕ್ಯೂರಿಟಿಯಿಂದ ತೆಗೆದು ಹಾಕಲಾಗಿದೆ.
ಎನ್ಎಸ್ಎಗೆ ಭದ್ರತೆ ಒದಗಿಸುವಲ್ಲಿ ವೈಫಲ್ಯ ತೋರಿದ ಆರೋಪದ ಮೇಲೆ ಮೂವರು ಕಮಾಂಡೋ ಹಾಗೂ ಒಬ್ಬ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರು ಈ ವರ್ಷದ ಫೆಬ್ರವರಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿದ್ದರಿಂದ ಈ ಕ್ರಮಕೈಗೊಳ್ಳಲಾಗಿದೆ.
2022ರ ಫೆಬ್ರವರಿಯಲ್ಲಿ ಅಜಿತ್ ದೋವಲ್ ಅವರ ನಿವಾಸದ ಆವರಣದೊಳಕ್ಕೆ ವ್ಯಕ್ತಿಯೊಬ್ಬ ಅತಿಕ್ರಮವಾಗಿ ಪ್ರವೇಶ ಮಾಡಲು ಯತ್ನಿಸಿದ್ದ. ಆತನನ್ನು ಕೊನೆಗೆ ಭದ್ರತಾ ಸಿಬ್ಬಂದಿ ತಡೆದಿದ್ದು, ನಂತರ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಆತ ಕೆಂಪು ಬಣ್ಣದ ಎಸ್ಯುವಿ ವಾಹನದಲ್ಲಿ ಬಂದು, ದೋವಲ್ ಅವರ ದೆಹಲಿ ನಿವಾಸದ ಗೇಟ್ ದಾಟಿ ನುಗ್ಗಲು ಯತ್ನಿಸಿದ್ದ. ಸಿಐಎಸ್ಎಫ್ ಯೋಧರು ಆತನನ್ನು ತಡೆದಿದ್ದರು.
ಆ ವ್ಯಕ್ತಿ ಬೆಂಗಳೂರಿನ ಶಂತನು ರೆಡ್ಡಿ ಎಂದು ಗುರುತಿಸಲಾಗಿದ್ದು, ಆತ ತನ್ನ ದೇಹದೊಳಗೆ ಚಿಪ್ ಇದ್ದು, ತನ್ನನ್ನು ಹೊರಗಿನಿಂದ ಯಾರೋ ನಿಯಂತ್ರಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದ. ಆದರೆ ಎಂಆರ್ಐ ಸ್ಕ್ಯಾನ್ಗೆ ಒಳಪಡಿಸಿದಾಗ ಯಾವುದೇ ಚಿಪ್ ಇಲ್ಲ ಎಂಬುದು ದೃಢಪಟ್ಟಿತ್ತು. ಆತ ನೋಯ್ಡಾದಲ್ಲಿ ಕಾರನ್ನು ಬಾಡಿಗೆಗೆ ಪಡೆದು ಬಂದಿದ್ದು, ಅವನು ಮಾನಸಿಕ ಸಮಸ್ಯೆ ಹೊಂದಿದ್ದ ಎನ್ನಲಾಗಿದೆ.
ದೋವಲ್ ನಿವಾಸ ಅತಿಭದ್ರತೆಯ ತಾಣವಾಗಿದ್ದು, ಅಲ್ಲಿಗೆ ಝಡ್ ಪ್ಲಸ್ ಕೆಟಗರಿ ಭದ್ರತೆ ನೀಡಲಾಗಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ದೋವಲ್ ತಮ್ಮ ನಿವಾಸದಲ್ಲೇ ಇದ್ದಿದ್ದು, ಅದೃಷ್ಟವಶಾತ್ ವ್ಯಕ್ತಿ ಸಿಕ್ಕಿಬಿದ್ದಿದ್ದ.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ‘ಡೊಳ್ಳು’, ಇದೀಗ ನಟ ಡಾಲಿ ಧನಂಜಯ ಮೂಲಕ ಮತ್ತೆ ಸದ್ದು!