ಐಮಂಗಲ: ಹೆಣ್ಣು-ಗಂಡೆಂಬ ಭೇದ ಹೋದರೆ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಅಭಿಪ್ರಾಯಪಟ್ಟರು.
ಗ್ರಾಮ ಹೊರ ಹೊಲಯದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಹಿಂದೆಲ್ಲಾ ಗಂಡು ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗುತ್ತಿತ್ತು. ಶಿಕ್ಷಣ ಪುರುಷರಿಗೆ ಸೀಮಿತವಾಗಿತ್ತು. ನಾಲ್ಕು ಗೋಡೆ ಮಧ್ಯೆಯೇ ಇರುತ್ತಿದ್ದ ಹೆಣ್ಣು ಮಕ್ಕಳಿಗೆ 18 ವರ್ಷಕ್ಕೂ ಮುಂಚೆಯೇ ಮದುವೆ ಮಾಡಲಾಗುತ್ತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಸ್ತ್ರೀಯರೂ ಶಿಕ್ಷಿತರಾಗಿದ್ದು, ಸರ್ವ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.
ಮಕ್ಕಳ ರಕ್ಷಣ ವೇದಿಕೆಯ ಶಿಲ್ಪಾ ಮಾತನಾಡಿ, ಅನುಮತಿ ಇಲ್ಲದೇ ಫೋಟೋ ತೆಗೆಯುವುದು, ಬೈಕ್ಗಳಲ್ಲಿ ಬಂದು ಕಿರುಕುಳ ನೀಡುವುದು, ಮೊಬೈಲ್ಗೆ ಅಶ್ಲೀಲ ಸಂದೇಶ ಕಳಿಸುವುದು, ಕರೆ ಮಾಡಿ ಬೆದರಿಕೆ ಹಾಕುವವರ ಬಗ್ಗೆ ಹೆಣ್ಮಕ್ಕಳು ಧೈರ್ಯದಿಂದ ಪೊಲೀಸರಿಗೆ ದೂರು ನೀಡಬೇಕು ಎಂದು ತಿಳಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಅಂಕಿತಾ, ಎಸ್.ರಶ್ಮಿ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯೆ ಸೌಮ್ಯಾ, ಪ್ರಾಂಶುಪಾಲರಾದ ರಮೇಶ್, ಡಾ.ಪ್ರಿಯಾಂಕಾ, ಅಂಗನವಾಡಿ ಶಿಕ್ಷಕಿಯರಾದ ಈ.ಎಚ್.ಅರುಣಾಕುಮಾರಿ, ಶ್ರೀದೇವಿ, ಸುಧಾ, ಮೇಲ್ವಿಚಾರಕರಾದ ಮುದ್ದಮ್ಮ, ಸಫೀಯಾಬಾನು, ಆರೋಗ್ಯ ಇಲಾಖೆಯ ರಮೇಶ್, ಅಮಿತ್ ಇತರರಿದ್ದರು.
ಮದುವೆ ಮಾಡಿದ್ರೆ ಜೈಲುಪಾಲು: ಹೆಣ್ಣು ಮಕ್ಕಳಿಗೆ 18 ವರ್ಷದೊಳಗೆ ಮದುವೆ ಮಾಡಿದರೆ ಪಾಲಕರು, ಸಂಬಂಧಿಕರು ಮತ್ತು ಸಹಕರಿಸಿದವರು ಜೈಲು ಸೇರಬೇಕಾಗುತ್ತದೆ. ಈ ಬಗ್ಗೆ ಎಚ್ಚರವಿರಬೇಕು. ಸರ್ಕಾರ ಹೆಣ್ಮಕ್ಕಳ ಶಿಕ್ಷಣ, ಪ್ರಗತಿಗೆ ಅನೇಕ ಯೋಜನೆ ಜಾರಿಗೊಳಿಸಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿ ಶಾಂತಕುಮಾರಿ ತಿಳಿಸಿದರು.