ಐಮಂಗಲ: ಜಲ ಸಂರಕ್ಷಣೆ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಆಧಾರವಾಗಿರುವ ಕೆರೆ ಕಟ್ಟೆಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮಸ್ಕಲ್ ಜಿಪಂ ಸದಸ್ಯೆ ಶಶಿಕಲಾ ಸುರೇಶ್ಬಾಬು ತಿಳಿಸಿದರು.
ಹೋಬಳಿಯ ಎಂ.ಡಿ.ಕೋಟೆ ಗ್ರಾಮದಲ್ಲಿ ಸೋಮವಾರ ಜಲಾಮೃತ ಯೋಜನೆಯಡಿ ಹಮ್ಮಿಕೊಂಡಿದ್ದ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೆರೆಗಳ ಹೂಳು ತೆಗೆಸುವುದರಿಂದ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಳವಾಗಿ ಅಂತರ್ಜಲ ವೃದ್ಧಿಯಾಗುತ್ತದೆ. ಇದರಿಂದ ಕೃಷಿ, ಕುಡಿವ ನೀರಿನ ಪಂಪ್ಸೆಟ್ಗಳ ಜಲ ಮರುಪೂರಣವಾಗುತ್ತದೆ. ಹೀಗಾಗಿ ಎಲ್ಲರೂ ತಮ್ಮ ಭಾಗದ ಕೆರೆ ಕಟ್ಟೆಗಳನ್ನು ಸಂರಕ್ಷಣೆ ಮಾಡಬೇಕು ಎಂದರು.
ಹಿಂದೆ 200 ಅಡಿ ಕೊಳವೆಬಾವಿ ಕೊರೆದರೆ ಉತ್ತಮ ನೀರು ದೊರೆಯುತ್ತಿತ್ತು. ಈಗ ಸಾವಿರಾರು ಅಡಿ ಕೊರೆದರೂ ಹನಿ ನೀರು ಸಿಗುತ್ತಿಲ್ಲ. ಈ ಬವಣೆ ನೀಗಲು ಜಲಮೂಲಗಳ ಸಂಕ್ಷಣೆಯೊಂದಲೇ ಉತ್ತಮ ಮಾರ್ಗ ಎಂದು ತಿಳಿಸಿದರು.
ಕೆರೆಯ ಮಣ್ಣು ಉತ್ತಮ ಫಲವತ್ತತೆ ಒಳಗೊಂಡಿರುತ್ತದೆ. ರೈತರು ಒಂದು ಟ್ರಾೃಕ್ಟರ್ ಲೋಡ್ ಮಣ್ಣನ್ನು 20 ರೂ. ಪಾವತಿಸಿ ಜಮೀನಿಗೆ ಹೇರಿಕೊಳ್ಳಬಹುದು. ತಾವು ಪಾವತಿಸುವ ಹಣ ಪಂಚಾಯಿತಿಯ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾಗುತ್ತದೆ ಎಂದರು.
ಉದ್ಯೋಗ ಖಾತರಿ ಯೋಜನೆಯಡಿ ಜಮೀನಿನಲ್ಲಿ ಬದು, ಕೃಷಿ ಹೊಂಡ ನಿರ್ಮಾಣಕ್ಕೆ ಅವಕಾಶವಿದೆ. ಇದಲ್ಲದೆ ಕೃಷಿ ಇಲಾಖೆಯಿಂದಲೂ ಹಲವಾರು ಯೋಜನೆಗಳಿವೆ ಎಂದು ಮಾಹಿತಿ ನೀಡಿದರು.
ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಜಿಪಂ ಸದಸ್ಯೆ ಟಿ.ಆರ್.ರಾಜೇಶ್ವರಿ, ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಪಿಡಿಒ ಕೆಂಚಪ್ಪ, ಸದಸ್ಯರಾದ ಸಿದ್ದೇಶ್, ಶೇಖರಪ್ಪ, ರಾಜಣ್ಣ, ಗುರುಮೂರ್ತಿ, ಶಶಿಧರ್, ಸುರೇಶ್, ನಾಗರಾಜು, ಕಂದಿಕೆರೆ ಸುರೇಶ್ಬಾಬು, ಹಿರಿಯರಾದ ನಾಗಪ್ಪ ಮಾಸ್ಟರ್, ಪರಮೇಶ್, ಹನುಮಂತರೆಡ್ಡಿ, ಮಂಜಣ್ಣ, ನಿಂಗಪ್ಪ ಚಿದಾನಂದ್ ಇತರರಿದ್ದರು.