ನವದೆಹಲಿ: ಅಗ್ನಿಪಥ ಯೋಜನೆ ವಿರೋಧಿಸಿ ಬಿಹಾರದಲ್ಲಿ ಕೈಗೊಂಡಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಪ್ರತಿಭಟನಾಕಾರರಿಂದ ಭಾರೀ ನಷ್ಟ ಆಗಿದ್ದು, ಇದೀಗ ನಷ್ಟದ ಲೆಕ್ಕ ಹಾಕಿರುವ ರೈಲ್ವೇ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಯೋಜನೆ ವಿರೋಧಿಸಿ ಕೈಗೊಂಡಿದ್ದ ರೈಲುಗಳಿಗೆ ಬೆಂಕಿ ಹಚ್ಚಲಾಗಿತ್ತು, ಬರೋಬ್ಬರಿ 50 ಬೋಗಿಗಳು ಬೆಂಕಿಗಾಹುತಿಯಾಗಿದ್ದು, ಇದರಿಂದ 200 ಕೋಟಿ ರೂ.ನಷ್ಟ ಆಗಿದೆ ಎಂದು ರೈಲ್ವೇ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊಹಿಯುದ್ದಿನ್ ರೈಲು ನಿಲ್ದಾಣದಲ್ಲಿ ನಿಂತಿದ್ದ, 1160 ಪ್ರಯಾಣಿಕರಿದ್ದ ಗುಹಾಹಟಿ-ಜಮ್ಮು ಎಕ್ಸ್ಪ್ರೆಸ್ನ 6 ಬೋಗಿಗಳಿಗೆ ಬೆಂಕಿ ಹಚ್ಚಲಾಗಿತ್ತು, ಈ ವೇಳೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಇನ್ನು ರಾಜ್ಯದ ಹಲವು ರೈಲ್ವೇ ನಿಲ್ದಾಣಗಳಲ್ಲಿ ಬೆಂಕಿ ಹಚ್ಚಿ ಆಕ್ರೊಶ ವ್ಯಕ್ತಪಡಿಸಲಾಗಿತ್ತು. ಇದರಿಂದ ಸರ್ಕಾರಕ್ಕೆ ಭಾರೀ ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಶನಿವಾರವೂ ರೈಲು ತಡೆದು ಪ್ರತಿಭಟನೆ ಮುಂದುವರಿಸಲಾಗಿದ್ದು, ಆದರೆ ಭದ್ರತಾ ಪಡೆಗಳು ಸಂಪೂರ್ಣ ಎಚ್ಚರಿಕೆ ಕೈಗೊಂಡಿದ್ದಾರೆ. ಬೋಗಿಗಳಲ್ಲಿ ಬೆಂಕಿ ಹಚ್ಚಿದ ಕೆಲವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ತಿಳಿಸಿದ್ದಾರೆ.
ವಿಡಿಯೋ, ವಾಟ್ಸಾಪ್ ಸಹಾಯದಿಂದ ಹಲವರನ್ನು ಬಂಧಿಸುವ ಕಾರ್ಯ ಮುಂದುವರಿಸಲಾಗಿದ್ದು, ಸಾರ್ವಜನಿಕರ ಆಸ್ತಿ ನಷ್ಟಗೊಳಿಸಿದ ಆರೋಪದ ಮೇಲೆ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ಅಗ್ನಿಪಥ ಯೋಜನೆಗೆ ತೀವ್ರ ವಿರೋಧದ ಬೆನ್ನಲ್ಲೇ ಮೀಸಲಾತಿ ಘೋಷಿಸಿದ ಕೇಂದ್ರ ಗೃಹ ಸಚಿವಾಲಯ