ಹೊಸಪೇಟೆ: ನಗರದ ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಎಸ್ಡಿಎಂಸಿ ಅಧ್ಯಕ್ಷೆ ಮಂಜುಳಾ ವಿಶ್ವನಾಥ್ ಹಾಗೂ ಸದಸ್ಯರು ಮಂಗಳವಾರ ಬಿಇಒ ಕಚೇರಿ ಅಧಿಕಾರಿ ಸರ್ವೋತ್ತಮ ಗೌಡಗೆ ಮನವಿ ಸಲ್ಲಿಸಿದರು.
ಅಧ್ಯಕ್ಷೆ ಮಂಜುಳಾ ವಿಶ್ವನಾಥ ಮಾತನಾಡಿ, ಶಾಲೆ ಆರಂಭದ ಮೊದಲ ದಿನವೇ ಶಾಲೆಯ ಗೇಟ್ ಮುಚ್ಚುವ ಮೂಲಕ ನನ್ನನ್ನು ಹೊರಗೆ ನಿಲ್ಲಿಸಿದ್ದು, ಎಸ್ಡಿಎಂಸಿ ಅಧ್ಯಕ್ಷರ ಹಕ್ಕು ಮತ್ತು ಕರ್ತವ್ಯ ಮೊಟಕುಗೊಳಿಸಲು ಯತ್ನಿಸಿದ್ದಾರೆ. ಶಾಲೆ ಆರಂಭದ ಮಾಹಿತಿ ನೀಡಿಲ್ಲ. ಸ್ವಾತಂತ್ರ್ಯ ದಿನಾಚರಣೆಗೂ ಆಹ್ವಾನಿಸಿಲ್ಲ. ಸದಸ್ಯರಿಗೆ ಅಗೌರವ ತೋರಿ ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕಿ ಆರ್.ಸುಲೋಚನಾಬಾಯಿಯನ್ನು ಡಿಡಿಪಿಐ ಕಂಪ್ಲಿಯ ಬಾಲಕರ ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯರ ಹುದ್ದೆಗೆ ತಾತ್ಕಾಲಿಕವಾಗಿ ನಿಯೋಜಿಸಿದ್ದರು. ತನಿಖೆ ಪೂರ್ಣಗೊಳ್ಳುವ ಮುನ್ನವೇ ಮತ್ತೆ ಆದರ್ಶ ವಿದ್ಯಾಲಯಕ್ಕೆ ನಿಯೋಜನೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಮುಖ್ಯಶಿಕ್ಷಕಿಯನ್ನು ವಜಾಗೊಳಿಸಿ, ಶಾಲೆಗೆ ಕಾಯಂ ಮುಖ್ಯಶಿಕ್ಷರನ್ನು ನಿಯೋಜಿಸುವಂತೆ ಆಗ್ರಹಿಸಿದರು.ಕರವೇ ಯುವ ಸೇನೆ ಸಂಘಟನಾ ಕಾರ್ಯದರ್ಶಿ ಬಿ.ಟಿ.ಮಂಜುನಾಥ್, ಪಾಲಕರಾದ ಉದಯ್ಕುಮಾರ್, ಚಂದ್ರಶೇಖರ್, ಬಾಲನಗೌಡ ಇತರರಿದ್ದರು.
ಟ್ಯಾಂಕರ್ ನೀರಿನ ವ್ಯವಸ್ಥೆ: ಶಾಲೆಯಲ್ಲಿ ಬೋರ್ವೆಲ್ ಕೆಟ್ಟಿದ್ದರಿಂದ ಶೌಚಗೃಹ ಬಳಕೆಗೆ ಮಳೆ ನೀರು ಸಂಗ್ರಹಿಸಿಡಲಾಗಿತ್ತು . ಸೋಮವಾರ ಶಾಲೆ ಆರಂಭವಾದರೂ ಸಿದ್ಧತೆ ಮಾಡಿರಲಿಲ್ಲ. ಮಂಗಳವಾರ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ.