ಹರಿಹರ: ತಾಲೂಕಿನ ಕೊಂಡಜ್ಜಿ ಅರಣ್ಯ ಪ್ರದೇಶದಲ್ಲಿ ನೂರಾರು ಕೋಳಿಗಳ ಕಳೇಬರವನ್ನು ಚೀಲಗಳಲ್ಲಿ ತುಂಬಿ ಬಿಸಾಕಿದ್ದು ಹಕ್ಕಿ ಜ್ವರದ ಆತಂಕ ಸೃಷ್ಟಿಯಾಗಿದೆ. ವಿಷಯ ತಿಳಿದು ದಾವಣಗೆರೆ ಪಶು ಇಲಾಖೆ ಉಪ ನಿರ್ದೇಶಕ ಡಾ. ಭಾಸ್ಕರ್ ನಾಯ್ಕ ನೇತೃತ್ವದ ತಂಡ ಕೊಂಡಜ್ಜಿಗೆ ಭೇಟಿ ನೀಡಿ ಪರಿಶೀಲಿಸಿದೆ. ಕೊಂಡಜ್ಜಿ ಸುತ್ತಲಿನ ಫಾರಂ ಕೋಳಿ ಹಾಗೂ ಮನೆಗಳಲ್ಲಿ ಸಾಕಣೆ ಮಾಡುವ ಕೋಳಿಗಳ ರಕ್ತ ಹಾಗೂ ಶ್ವಾಸ ನಾಳ, ಗುದದ್ವಾರದ ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬೆಂಗಳೂರಿನ ಪ್ರಯೋಗಾಲಯದಲ್ಲಿ ಪರೀಕ್ಷಾ ವರದಿ ಪಾಸಿಟಿವ್ ಬಂದರೆ ಖಚಿತತೆಗಾಗಿ ಇದನ್ನು ಮಧ್ಯಪ್ರದೇಶದ ಭೋಪಾಲ್ಗೆ ಕಳುಹಿಸಲಾಗುವುದು ಎಂದು ಡಿಡಿ ಭಾಸ್ಕರ್ ನಾಯ್ಕ ತಿಳಿಸಿದ್ದಾರೆ.
ಎಲ್ಲಿಂದ ಬಂದವು?: ಕೊಂಡಜ್ಜಿ ಸಮೀಪ ಅಂದಾಜು 150 ಕೋಳಿಗಳನ್ನು ಎಸೆಯಲಾಗಿದೆ. ಇವುಗಳಲ್ಲಿ ಪ್ರತಿಯೊಂದರ ಗಾತ್ರ 2 ಕೆ.ಜಿ.ಗಿಂತ ಹೆಚ್ಚಿದೆ. ಈ ಪ್ರಮಾಣದ ಕೋಳಿಗಳು ಸುತ್ತಲಿನ ಫಾರಂಗಳಲ್ಲಿ ಇಲ್ಲ. ಹೀಗಾಗಿ ಸತ್ತ ಕೋಳಿಗಳನ್ನು ಎಲ್ಲಿಂದಲೋ ತಂದು ಬಿಸಾಡಿದ್ದಾರೆ. ಇವು ಎಲ್ಲಿಯವು ಎಂದು ಖಚಿತವಾಗಿಲ್ಲ. ಕೋಳಿಗಳ ಕಳೇಬರ ಕೊಳೆತಿದೆ. ಈ ಸ್ಥಿತಿಯಲ್ಲಿ ಅವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗದು. ಹೀಗಾಗಿ ಜೆಸಿಬಿಯಿಂದ ಗುಂಡಿ ತೆಗೆದು ವೈಜ್ಞಾನಿಕವಾಗಿ ಹೂಳಲಾಗುತ್ತದೆ ಪರಿಣತರು ಎಂದು ತಿಳಿಸಿದ್ದಾರೆ. ಪರಿಣತ ವೈದ್ಯರ ತಂಡದಲ್ಲಿ ಡಾ.ವೀರೇಶ್, ಡಾ.ಸತೀಶ್ ಕೆ.ಜಿ., ಡಾ.ಅನ್ವರ್ ಜೆ.ಎಂ. ಇತರರಿದ್ದರು.
ರಾಜ್ಯ ರಸ್ತೆ ಸಾರಿಗೆ ನೌಕರರಿಂದ ಮತ್ತೆ ಮುಷ್ಕರ; ಬೇಡಿಕೆ ಈಡೇರದ ಕಾರಣಕ್ಕೆ ನಿರ್ಧಾರ