ಗುವಾಹಟಿ: ಇಡೀ ವಿಶ್ವಕ್ಕೆ ಕರೊನಾ ಸೋಂಕು ಹಚ್ಚಿಸಿ ಜನಜೀವನವನ್ನು ಅಯೋಮಯ ಮಾಡಿರುವ ಚೀನಾ ಇದೀಗ ಭಾರತಕ್ಕೆ ಇನ್ನೊಂದು ಆಘಾತ ನೀಡಿದೆ.
ಹಂದಿ ಜ್ವರ (ಸ್ವೈನ್ ಫ್ಲೂ) ಈಗಾಗಲೇ ಭಾರತಕ್ಕೂ ಕಾಲಿಟ್ಟು ಅನೇಕ ಪ್ರಾಣಗಳನ್ನು ಕಿತ್ತುಕೊಂಡಿದೆ. ಇದೀಗ, ಆಫ್ರಿಕನ್ ಹಂದಿ ಜ್ವರ (ಸ್ವೈನ್ ಫೀವರ್) ಎಂದು ಕರೆಯಲಾಗುವ ಹಂದಿಗಳ ಕಾಯಿಲೆ ಚೀನಾದಿಂದ ಶುರುವಾಗಿದೆ. ಇದೀಗ ಈ ಕಾಯಿಲೆ ಭಾರತಕ್ಕೂ ಕಾಲಿಟ್ಟಿದೆ. ಅಸ್ಸಾಂನ 306 ಹಳ್ಳಿಗಳಲ್ಲಿನ ಹಂದಿಗಳಿಗೆ ಈ ಸೋಂಕು ತಲುಪಿದ್ದು, ಇದಾಗಲೇ ಎರಡೂವರೆ ಸಾವಿರಕ್ಕೂ ಅಧಿಕ ಹಂದಿಗಳು ಮೃತಪಟ್ಟಿವೆ.
ಇದನ್ನೂ ಓದಿ: ಮದ್ಯ ಪ್ರೇಮಿಗಳಿಗೆ ಹೂವು ಹಾಕಿ ಸ್ವಾಗತ- ವೀಡಿಯೋ ವೈರಲ್
ಈ ಜ್ವರ ಮನುಷ್ಯರಿಗೆ ತಗುಲುವ ಸಾಧ್ಯತೆ ಇಲ್ಲ ಎನ್ನುವುದೇ ಸಮಾಧಾನದ ಸಂಗತಿಯಾಗಿದೆ. ಆದರೆ ಹಂದಿ ಸಾಕಣೆ ಮಾಡುವವರಿಗೆ ಮಾತ್ರ ಈ ಜ್ವರ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಆಫ್ರಿಕನ್ ಹಂದಿ ಜ್ವರದ ಮೂಲ ಚೀನಾದ ಕ್ಸಿಜಾಂಗ್ ಪ್ರಾಂತ್ಯ. ಅರುಣಾಚಲ ಪ್ರದೇಶ ಮತ್ತು ಚೀನಾದ ಗಡಿ ಭಾಗದಲ್ಲಿ ಈ ಪ್ರದೇಶವಿದೆ. ಇಲ್ಲಿಯೇ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದೆ ಎಂದು ಕೇಂದ್ರ ಪಶುಸಂಗೋಪನಾ ಸಚಿವ ಅತುಲ್ ಬೋರಾ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 8 ಹೊಸ ಸೋಂಕು ಪ್ರಕರಣ: ಎಲ್ಲೆಲ್ಲಿ ಎಷ್ಟೆಷ್ಟು?
ಭಾರತದಲ್ಲಿ ಇದೇ ಮೊದಲ ಬಾರಿಗೆ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು, 2,500ಕ್ಕೂ ಅಧಿಕ ಹಂದಿಗಳು ಇದಕ್ಕೆ ಬಲಿಯಾಗಿವೆ. ಇದು ಅತ್ಯಂತ ಅಪಾಯಕಾರಿ ವೈರಸ್ ಆಗಿದೆ. ಆದರೆ ಸ್ವೈನ್ ಫ್ಲೂದಂತೆ (ಹಂದಿ ಜ್ವರ), ಆಫ್ರಿಕನ್ ಹಂದಿಜ್ವರ ಮನುಷ್ಯರಿಗೆ ಹರಡುವ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಆದ್ದರಿಂದ ಜನರು ಹೆದರುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ.
ಈ ಜ್ವರದ ಲಕ್ಷಣ ಕಾಣಿಸಿಕೊಂಡಿರುವ ಹಂದಿಗಳನ್ನು ಕೊಲ್ಲುವಂತೆ ಸರ್ಕಾರ ಅನುಮತಿ ನೀಡಿದೆ. ಮೊದಲು ಏಕಾಏಕಿ ಹಂದಿಗಳನ್ನು ಕೊಲ್ಲುವ ಬದಲು ಸೋಂಕು ಹರಡುವುದನ್ನು ತಡೆಯಲು ಏನಾದರೂ ಕ್ರಮ ತೆಗೆದುಕೊಳ್ಳಬಹುದೇ ಎಂದು ನೋಡಲಾಗುವುದು. ಈ ಜ್ವರ ಮನುಷ್ಯರಿಗೆ ಹರಡದ ಕಾರಣ, ಎಲ್ಲಾ ಹಂದಿಗಳನ್ನು ಕೊಲ್ಲುವುದು ಸರಿಯಲ್ಲ. 2019ರ ಗಣತಿ ಅನುಸಾರ ಅಸ್ಸಾಂನಲ್ಲಿ 21 ಲಕ್ಷ ಹಂದಿಗಳು ಇದ್ದವು, ಅವುಗಳ ಸಂಖ್ಯೆ ಈಗ 30 ಲಕ್ಷಕ್ಕೆ ಏರಿದೆ. ಅವುಗಳನ್ನು ನಾಶ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬಾರ್ಗಳ ಮುಂದೆ ಮಹಿಳೆಯರದ್ದೂ ಕಾರುಬಾರು!
ರಾಜ್ಯದಲ್ಲಿ ಈ ಜ್ವರ ದಿನೆ ದಿನೇ ಹೆಚ್ಚುತ್ತಿರುವುದಕ್ಕೆ ಅಸ್ಸಾಂ ಮುಖ್ಯಮಂತ್ರಿ ಸರಬಾನಂದ ಸೋನೊವಾಲ್ ಆತಂಕ ವ್ಯಕ್ತಪಡಿಸಿದ್ದಾರೆ. ಕಾಯಿಲೆಯನ್ನು ನಿಭಾಯಿಸಲು ಯೋಜನೆ ರೂಪಿಸುವಂತೆ ಪಶುವೈದ್ಯರು ಮತ್ತು ಅರಣ್ಯ ಇಲಾಖೆಗೆ ಅವರು ಸೂಚನೆ ನೀಡಿದ್ದಾರೆ.
ಈ ಹಂದಿ ಜ್ವರದಿಂದಾಗಿ ಅಸ್ಸಾಂನಲ್ಲಿ ಹಂದಿ ಸಾಕಾಣಿಕಾ ಕೇಂದ್ರದವರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಅವರಿಗೆ ಪರಿಹಾರದ ಪ್ಯಾಕೇಜ್ ನೀಡಲು ಸರ್ಕಾರ ನಿರ್ಧರಿಸಿದೆ. (ಏಜೆನ್ಸೀಸ್)