ಕಾಬುಲ್/ನವದೆಹಲಿ : ತಾಲಿಬಾನ್ ಘೋಷಿಸಿರುವ ಯುದ್ಧದಿಂದ ಕಂಗಾಲಾಗಿರುವ ಅಫ್ಘಾನಿಸ್ತಾನದ, ಸೇನಾ ಮುಖ್ಯಸ್ಥ ಜನರಲ್ ವಾಲಿ ಮೊಹಮ್ಮದ್ ಅಹ್ಮದ್ಜಾಯಿ ಅವರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ದೇಶದ ಶೇ. 80 ಕ್ಕೂ ಹೆಚ್ಚು ಭಾಗವನ್ನು ಆಕ್ರಮಿಸಿಕೊಂಡಿರುವ ತಾಲಿಬಾನ್ ವಿರುದ್ಧ ಕಾರ್ಯಾಚರಣೆ ನಡೆಸಲು ಭಾರತದಿಂದ ಮಿಲಿಟರಿ ಸಹಾಯ ಕೋರುವುದು ಈ ಭೇಟಿಯ ಉದ್ದೇಶ ಎನ್ನಲಾಗಿದೆ.
ಜುಲೈ 27 ರಿಂದ 30 ರವರೆಗೆ ಅವರು ಭಾರತ ಭೇಟಿಯ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್, ಚೀಫ್ ಆಫ್ ಡಿಫೆನ್ಸ್ ಸ್ಟ್ಯಾಫ್ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್.ಭದೌರಿಯ ಅವರನ್ನು ವಾಲಿ ಮೊಹಮ್ಮದ್ ಅಹ್ಮದ್ಜಾಯಿ ಅವರು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಆಫ್ಘಾನ್ ಸಂಘರ್ಷದಲ್ಲಿ ಪಾಕ್ ಕೈವಾಡ? ತಾಲಿಬಾನ್ ವಕ್ತಾರ ಕೊಟ್ಟ ಸ್ಪಷ್ಟನೆ ಹೀಗಿದೆ..!
ಭಾರತದಿಂದ ಮಿಲಿಟರಿ ಪೂರೈಕೆಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸುವುದು ಅವರ ಮುಖ್ಯ ಅಜೆಂಡಾ ಆಗಿದೆ. ಈ ಸಂದರ್ಭದಲ್ಲಿ ಡೆಹ್ರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿ ಮತ್ತು ಮ್ಹೌನ ಆರ್ಮಿ ವಾರ್ ಕಾಲೇಜ್ಗೆ ಭೇಟಿ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಳೆದ ಕೆಲವು ವರ್ಷಗಳಲ್ಲಿ, ಅಫ್ಘಾನಿಸ್ತಾನದ ಅಭಿವೃದ್ಧಿ ಮತ್ತು ಪುನರ್ನಿರ್ಮಾಣ ಚಟುವಟಿಕೆಗಳಿಗಾಗಿ 3 ಬಿಲಿಯನ್ ಡಾಲರ್ನಷ್ಟು ನೆರವು ನೀಡಿರುವ ಭಾರತ, ಮಿಲಿಟರಿ ಹಾರ್ಡ್ವೇರ್, ಹೆಲಿಕಾಪ್ಟರ್-ಚಾಪರ್ಗಳು ಮತ್ತು ತರಬೇತಿಯ ಸಹಾಯ ಒದಗಿಸಿದೆ ಎನ್ನಲಾಗಿದೆ.
ಅಮೆರಿಕದ ಸೇನಾ ಪಡೆಗಳ ಹಿಂತೆಗೆತದ ಹಿನ್ನೆಲೆಯಲ್ಲಿ ತಾಲಿಬಾನ್, ಅಫ್ಘಾನಿಸ್ತಾನದ ನಿಯಂತ್ರಣ ಗಳಿಸುವತ್ತಾ ದೊಡ್ಡ ಹೆಜ್ಜೆಗಳನ್ನು ಹಾಕುತ್ತಿದೆ. ಪಾಕಿಸ್ತಾನದೊಂದಿಗೆ ಗಾಢ ಸಂಬಂಧ ಹೊಂದಿರುವ ತಾಲಿಬಾನ್ ಮತ್ತೆ ಅಧಿಕಾರ ಪಡೆದಲ್ಲಿ, ಭಾರತ ಆ ಪ್ರದೇಶದ ಮೇಲೆ ತನ್ನ ಪ್ರಭಾವ ಕಳೆದುಕೊಳ್ಳುವ ಆತಂಕ ಹೊಂದಿದೆ ಎನ್ನಲಾಗಿದೆ. (ಏಜೆನ್ಸೀಸ್)
ಕಾರಿನಲ್ಲಿ ಹಣವಿಟ್ಟು ಚಾಲಕನಿಗೆ ಹೇಳಿ ಹೋದರು… ವಾಪಸ್ ಬಂದಾಗ ಕಾದಿತ್ತು ಶಾಕ್!