ಹಿರೇಕೆರೂರ: ನಮ್ಮದು ಕೃಷಿ ಪ್ರಧಾನ ದೇಶವಾಗಿದ್ದು, ಸತತ ಬರಗಾಲದಿಂದ ತೊಂದರೆಗೀಡಾದ ರೈತರಿಗೆ ಉಪಕಸುಬಾದ ಹೈನುಗಾರಿಕೆ ಸ್ವಲ್ಪಮಟ್ಟಿಗೆ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಆರೀಕಟ್ಟಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಮಿಶ್ರತಳಿ ಹಸು ಮತ್ತು ಎಮ್ಮೆ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಒಕ್ಕಲುತನದ ಜತೆಗೆ ಉಪಕಸುಬಾದ ಹೈನುಗಾರಿಕೆಯನ್ನು ಅಳವಡಿಸಿಕೊಳ್ಳಬೇಕು. ರೈತರು ತಾವೇ ದರ ನಿಗದಿ ಮಾಡುವ ಯಾವುದಾದರೂ ಕ್ಷೇತ್ರವಿದ್ದರೆ ಅದು ಹಾಲು ಉತ್ಪಾದನೆ. ಸರ್ಕಾರ ಹಾಲಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಪಶು ವೈದ್ಯರು, ಅಧಿಕಾರಿಗಳು ರೈತರ ಆಕಳು, ಎಮ್ಮೆ ಮತ್ತು ಎತ್ತುಗಳಿಗೆ ಕಾಲಕಾಲಕ್ಕೆ ಉತ್ತಮ ಚಿಕಿತ್ಸೆ ಹಾಗೂ ಲಸಿಕೆ ನೀಡಬೇಕು ಎಂದರು.
ಧಾರವಾಡ ಕೆಎಂಎಫ್ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಕಿರಣ.ಎಲ್., ಗ್ರಾಪಂ ಅಧ್ಯಕ್ಷ ಜಗದೀಶ ಹಾರೋಮುಚುಡಿ, ಉಪಾಧ್ಯಕ್ಷೆ ಗಾಯಿತ್ರಾ ಇಳಿಗೇರ, ಸದಸ್ಯರಾದ ಕುಮಾರ ಹೊಟ್ಟೇರ, ನಿರ್ಮಲಾ ಬಡಿಗೇರ, ಮಧುರಾಕ್ಷಿ ಕಡೆಮನಿ, ರೇವಣೆಪ್ಪ ಹಂಸಭಾವಿ, ಭರಮಪ್ಪ ಬಣಕಾರ ಹಾಗೂ ಪಶು ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು, ಗ್ರಾಮಸ್ಥರು ಇದ್ದರು.