ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ದಿಢೀರ್ ಸುದ್ದಿಗೋಷ್ಠಿ ಕರೆದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇಂದು ಮಧ್ಯಾಹ್ನ 2.30ಕ್ಕೆ ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಯಾವ ವಿಚಾರವನ್ನು ಪ್ರಸ್ತಾಪ ಮಾಡಲಿದ್ದಾರೆ ಎಂಬುದೇ ಇದೀಗ ಕುತೂಹಲಕಾರಿ ಸಂಗತಿಯಾಗಿದೆ. ಸಿನಿಮಾ ಕುರಿತು ಏನಾದರೂ ಮಾತನಾಡುತ್ತಾರಾ? ಅಥವಾ ಬೇರೆ ವಿಚಾರದ ಬಗ್ಗೆ ಮಾತನಾಡುತ್ತಾರಾ? ಎಂಬ ಕುತೂಹಲವಿದೆ.
ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಬಂಧಿತನಾಗಿರುವ ಆರೋಪಿ ಯುವರಾಜನ ಪ್ರಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ಹೆಸರು ಕೇಳುಬರುತ್ತಿದ್ದು, ಆ ಬಗ್ಗೆ ಸ್ಪಷ್ಟನೆ ನೀಡಲಿದ್ದಾರಾ ಎಂಬ ಪ್ರಶ್ನೆಯು ಮೂಡಿದೆ. ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಬ್ಯಾಂಕ್ ಖಾತೆಗೆ ಯುವರಾಜ್, ಒಂದು ಕೋಟಿ ರೂ. ಹಣ ವರ್ಗಾಯಿಸಿದ್ದಾನೆ ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ಯಾವ ವ್ಯವಹಾರಿಕ ಉದ್ದೇಶದಿಂದ ಹಣ ವರ್ಗಾವಣೆ ಆಗಿದೆ ಎಂಬುದರ ದಾಖಲೆಗಳ ಪರಿಶೀಲನೆಯನ್ನು ಸಿಸಿಬಿ ನಡೆಸುತ್ತಿದೆ ಎನ್ನಲಾಗಿದೆ. ಯುವರಾಜ್ನಿಂದ ನಟಿಗೆ ಹಣ ಸಂದಾಯವಾಗಲು ಕಾರಣ ಏನು? ಸಿನಿಮಾ ವಿಚಾರಕ್ಕಾಗಿ ಹಣದ ವ್ಯವಹಾರ ನಡೆದಿದೆಯಾ? ಯಾವುದಾದರೂ ಪ್ರಾಜೆಕ್ಟ್ ವಿಚಾರವಾಗಿ ನಡೆದಿದೆಯಾ? ಅಥವಾ ಉದ್ಯಮದ ವಿಚಾರವಾಗಿ ಹಣ ವರ್ಗಾವಣೆ ನಡೆದಿದೆಯಾ? ಎಂಬ ಹಲವು ಆಯಾಮಗಳಲ್ಲಿ ಸಿಸಿಬಿ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ದಾಖಲಾತಿಗಳ ಪರಿಶೀಲನೆ ಬಳಿಕ ನಟಿಗೆ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ. ಹೀಗಾಗಿ ರಾಧಿಕಾ ಅವರು ಮಧ್ಯಾಹ್ನ 2.30ಕ್ಕೆ ಕರೆದಿರುವ ಸುದ್ದಿಗೋಷ್ಠಿ ಸಾಕಷ್ಟು ಕುತೂಹಲ ಕೆರಳಿಸಿದೆ.