More

    ಬದಲಾದ ಕೃಷಿಗೆ ರೂಪಾಯಿ ಖುಷಿ; ಕೊಡಗಿನ ಹುಡುಗಿಯ ಸೀರಿಯಸ್ ಸಿನಿಮಾ ಕೃಷಿ

    | ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

    ನಟಿ ಕೃಷಿ ತಾಪಂಡ ಈಗ ಮೊದಲಿನಂತಿಲ್ಲ. ಬದಲಾಗಿದ್ದಾರೆ. ‘ಕಹಿ’, ‘ಕನ್ನಡಕ್ಕಾಗಿ ಒಂದನ್ನು ಒತ್ತಿ’, ‘ಎರಡು ಕನಸು’, ‘ಲಂಕೆ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ಅವರು, ಇದೀಗ ಚಿತ್ರರಂಗವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ. ಇನ್ನು ಮುಂದೆ ನಾನು ಬದಲಾದ ಕೃಷಿ ಎಂದು ಹೇಳಿಕೊಳ್ಳುತ್ತಾರೆ.

    ‘ವಿಜಯವಾಣಿ’ ಜತೆ ಮಾತಿಗೆ ಸಿಕ್ಕ ಅವರು, ‘ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಆದರೆ, ಸಿನಿಮಾಗಳ ಸಂಖ್ಯೆ ಹೆಚ್ಚು ತ್ತಿದೆಯೇ ವಿನಃ ನನ್ನ ಕರಿಯರ್ ಗ್ರಾಫ್ ಒಂದೇ ರೀತಿಯಲ್ಲಿ ಸಾಗುತ್ತಿದೆ. ಏಳುತ್ತಿಲ್ಲ, ಬೀಳುತ್ತಲೂ ಇಲ್ಲ ಅಂತನ್ನಿಸುತ್ತಿದೆ. ಹೀಗಾಗಿ ಇನ್ನು ಮುಂದೆ ಸ್ವಲ್ಪ ಸಮಯ ತೆಗೆದುಕೊಂಡರೂ ಪರವಾಗಿಲ್ಲ, ಎರಡು, ಮೂರು ತಿಂಗಳು ಕೆಲಸವಿಲ್ಲದೆ ಮನೆಯಲ್ಲಿ ಕುಳಿತರೂ ಬೇಸರವಿಲ್ಲ, ಒಂದೇ ಬಗೆಯ ಪಾತ್ರಗಳಲ್ಲಿ ನಟಿಸದೇ ನನ್ನ ಸಾಮರ್ಥ್ಯಕ್ಕೆ ತಕ್ಕ, ಭಿನ್ನ, ವಿಭಿನ್ನ ಶೈಲಿಯ ಪಾತ್ರಗಳು ಬರುವವರೆಗೂ ನಟಿಸುವುದು ಬೇಡ ಅಂತ ತೀರ್ವನಿಸಿದ್ದೇನೆ. ಓಟಿಟಿ ವೆಬ್​ಸರಣಿಗಳಲ್ಲಿ ನಟಿಸಬೇಕು, ಬೇರೆ ಭಾಷೆಗಳಲ್ಲೂ ಅಭಿನಯಿಸಬೇಕು ಅಂತಂದುಕೊಂಡಿದ್ದೇನೆ. ಪರಭಾಷೆಗಳ ಕೆಲವು ಪ್ರಾಜೆಕ್ಟ್​ಗಳಲ್ಲಿ ಮಾತುಕತೆ ನಡೆಯುತ್ತಿದೆ’ ಎಂದು ತಮ್ಮ ಮುಂದಿನ ಪ್ಲಾನ್​ಗಳ ಬಗ್ಗೆ ಹೇಳಿಕೊಳ್ಳುತ್ತಾರೆ ಕೃಷಿ.

    ಸದ್ಯ ಕೃಷಿ, ವಿಜಯ್ ಜಗದಾಳ್ ನಿರ್ದೇಶನದ ‘ರೂಪಾಯಿ’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಐದು ಮಂದಿಯ ಜೀವನದಲ್ಲಿ ಹಣ ಹೇಗೆಲ್ಲಾ ಆಟವಾಡುತ್ತದೆ, ಹಣಕ್ಕಾಗಿ ಅವರು ಹೇಗೆಲ್ಲಾ ಆಟವಾಡುತ್ತಾರೆ ಎಂಬುದು ಚಿತ್ರದ ಕಥೆ. ಜೀವನದ ಬಗ್ಗೆ ಗಂಭೀರವಾಗಿರುವ, ಮೌನ ಸ್ವಭಾವದ ಮುಗ್ಧ ಹುಡುಗಿಯ ಪಾತ್ರದಲ್ಲಿ ಕೃಷಿ ಕಾಣಿಸಿಕೊಂಡಿದ್ದಾರೆ.

    ಲವ್, ಆಕ್ಷನ್, ಕಾಮಿಡಿ … ಹೀಗೆ ‘ರೂಪಾಯಿ’ ಒಂದೊಳ್ಳೆಯ ಮನರಂಜನಾತ್ಮಕ ಸಿನಿಮಾ ಎನ್ನುವ ಕೃಷಿ, ‘ಹಣಕ್ಕಾಗಿ ಅಥವಾ ಹಣದಿಂದ ನಿಮಗೂ ಏನಾದರೂ ಸಮಸ್ಯೆ ಆಗಿದೆಯಾ ಅಂದರೆ, ಸಾಮಾನ್ಯವಾಗಿ ಏನೇ ಸಮಸ್ಯೆಯಾದರೂ ಫ್ರೆಂಡ್ಸ್ ಬಳಿ ಹೇಳಿಕೊಳ್ಳುತ್ತೇವೆ. ನಾನೂ ಹಾಗೇ ಅವರಿಗೇನಾದರೂ ಹಣದ ಸಮಸ್ಯೆ ಇದ್ದರೆ ನಾನು ಸಹಾಯ ಮಾಡುತ್ತೇನೆ. ನನಗೆ ಹಣ ಬೇಕಿದ್ದರೆ ಅವರು ಸಹಾಯ ಮಾಡುತ್ತಾರೆ. ಆದರೆ, ಇದುವರೆಗೂ ಹಣದ ವಿಷಯದಲ್ಲಿ ಫ್ರೆಂಡ್ಸ್ ಜತೆ ಭಿನ್ನಾಭಿಪ್ರಾಯ ವಾಗಿಲ್ಲ’ ಎಂದು ನಗುತ್ತಾರೆ ಕೃಷಿ. ‘ರೂಪಾಯಿ’ ಇದೇ ಶುಕ್ರವಾರ ತೆರೆಗೆ ಬರಲಿದ್ದು, ವಿಜಯ್, ಕೃಷಿ ಜತೆಗೆ ಯಾಶ್ವಿಕ್, ಮೈತ್ರಿ ಜಗ್ಗಿ, ಚಂದನಾ, ಶಂಕರಮೂರ್ತಿ, ರಾಮ್ ಚಂದನ್ ಪ್ರಮುಖ ತಾರಾಗಣದಲ್ಲಿದ್ದಾರೆ. ‘ರೂಪಾಯಿ’ ಜತೆಗೆ ಗಣ ಎಂಬ ಮತ್ತೊಂದು ಚಿತ್ರದಲ್ಲಿ ಕೃಷಿ ನಾಯಕಿಯಾಗಿದ್ದು, ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ವೀರ ಕಂಬಳ’ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಇನ್ನೂ ಹೆಸರಿಡದ ಚಿತ್ರದಲ್ಲಿ ನಟ ಕಿಶೋರ್​ಗೆ ನಾಯಕಿಯಾಗಿದ್ದಾರೆ.

    ಗರ್ಲ್​​ಫ್ರೆಂಡ್​ ತಾಯಿಗೆ ಹೆದರಿ ಸತ್ತೇ ಹೋದ; ಆಗಿದ್ದಾದರೂ ಏನು?

    ಶಾಸಕರ ಪುತ್ರಿಯನ್ನು ಕಾಲೇಜಿನಿಂದ ಕರೆತರಲು ಹೋಗಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು, ನಾಲ್ವರಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts