ಬೆಂಗಳೂರು: ಜಟ್ಟ’ ಸಿನಿಮಾ ಖ್ಯಾತಿಯ ನಿರ್ದೇಶಕ ಬಿ.ಎಂ. ಗಿರಿರಾಜ್ ನಿರ್ದೇಶನದ ಕನ್ನಡಿಗ ಚಿತ್ರದ ಕೆಲಸಗಳು ಚುರುಕುಗೊಂಡಿವೆ. ವಿಜಯದಶಮಿ ದಿನದಂದು ಸೆಟ್ಟೇರುವ ಈ ಸಿನಿಮಾಗೆ ‘ಕನ್ನಡಿಗ’ ಎಂಬ ಶೀರ್ಷಿಕೆ ಇಡಲಾಗಿದೆ. ಲಿಪಿಕಾರ ಗುಣಭದ್ರನಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಹೊಸಥರಹದ ವೇಷ ತೊಟ್ಟಿದ್ದು, ಇತ್ತೀಚೆಗಷ್ಟೇ ಅವರ ಆ ಲುಕ್ ಹೊರಬಿದ್ದಿತ್ತು. ಇದೀಗ ವಿದೇಶಿ ಕನ್ನಡಿಗನನ್ನು ತಂಡ ಪರಿಚಯಿಸಿದೆ.
ಇದನ್ನೂ ಓದಿ: ‘ಖೈಮರಾ’ ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಚಾಲನೆ
ಇದೇ ಚಿತ್ರದಲ್ಲಿ ಮತ್ತೊಂದು ವಿಶೇಷ ಪಾತ್ರ ಮಾಡಲಿರುವ ಜೇಮಿ ಅಲ್ಟರ್ ಸಹ ಇದೀಗ ತಂಡ ಸೇರಿಕೊಂಡಿದ್ದು, ಸಾಗರದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 1850ರ ಬ್ರಿಟಿಷ್ ಮತ್ತು ಪೋರ್ಚುಗೀಸರ ಆಳ್ವಿಕೆಯ ಕಾಲಘಟ್ಟದಲ್ಲಿ ನಡೆಯುವ ಈ ಕಥೆಯಲ್ಲಿ ಕನ್ನಡದ ವಿದ್ವಾಂಸನಾಗಿ ರವಿಚಂದ್ರನ್ ಕಾಣಿಸಿದರೆ, ಖ್ಯಾತ ನಟ ಟಾಮ್ ಅಲ್ಟರ್ ಅವರ ಪುತ್ರ ಜೇಮಿ ಅಲ್ಟರ್ ಈ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿದ್ದು, ಅವರಿಲ್ಲಿ ಜಾರ್ಜ್ ಫರ್ಡಿನಾಂಡ್ ಕಿಟೆಲ್ ಪಾತ್ರ ಮಾಡಲಿದ್ದಾರೆ.
ಇದನ್ನೂ ಓದಿ: ‘ಕೆಜಿಎಫ್’ ಚಿತ್ರದ ಶೂಟಿಂಗ್ಗೆ ಸಜ್ಜಾಗುತ್ತಿದ್ದಾರೆ ಅಧೀರ
‘ಒಂದಷ್ಟು ಅಧ್ಯಯನ ನಡೆಸಿ, ನೈಜ ಘಟನೆಯೊಂದನ್ನು ಸಿನಿಮಾ ಮೂಲಕ ತೆರೆಮೇಲೆ ತರುವ ಪ್ರಯತ್ನವಿದು. ಬರಹಗಾರನ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ, ಕನ್ನಡ ಭಾಷೆಯ ಉಳಿವಿಗಾಗಿ ಹೇಗೆ ಶ್ರಮಿಸುತ್ತಾನೆ ಎಂಬುದೇ ಈ ಚಿತ್ರದ ಕಥೆ’ ಎಂದು ನಿರ್ದೇಶಕರು ಈ ಹಿಂದೆಯೇ ಹೇಳಿಕೊಂಡಿದ್ದರು. ಈಗಾಗಲೇ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆದಿದ್ದು, ಸದ್ಯ ಶಿವಮೊಗ್ಗದ ಸಾಗರದಲ್ಲಿ ಬೀಡು ಬಿಟ್ಟಿದ್ದಾರೆ. ಒಂದಷ್ಟು ಸೆಟ್ಗಳನ್ನೂ ಈ ಚಿತ್ರಕ್ಕಾಗಿ ಸಿದ್ಧಪಡಿಸಿಲಿದೆ ಚಿತ್ರತಂಡ.