ಕಟಕೋಳ: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲು ಬಂದಾಗ ಸಾರ್ವಜನಿಕರು ಸಹಕಾರ ನೀಡಬೇಕು. ಅಸಭ್ಯವಾಗಿ ವರ್ತಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಎಚ್ಚರಿಸಿದ್ದಾರೆ.
ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಬೇರೆ ಪ್ರದೇಶಗಳಿಂದ ಆಗಮಿಸಿದ ಪ್ರತಿಯೊಬ್ಬರ ಮಾಹಿತಿ ಸಂಗ್ರಹಿಸಿ, ಆರೋಗ್ಯ ತಪಾಸಣೆ ಮಾಡಿ ಮುಂದಿನ ಕ್ರಮಕ್ಕಾಗಿ ತಾಲೂಕಾಡಳಿತಕ್ಕೆ ಮಾಹಿತಿ ನೀಡಬೇಕು ಎಂದರು.
ಕರೊನಾ ನಿಯಂತ್ರಣಕ್ಕಾಗಿ ಸಿಎಂ ಪರಿಹಾರ ನಿಧಿಗೆ ಗುತ್ತಿಗೆದಾರ ಎಂ.ಎಂ.ಆತಾರ, ಎಸ್.ಎ.ಶೆಟ್ಟಿಸದಾವರ್ತಿ ತಲಾ ಒಂದು ಲಕ್ಷ ರೂ., ಚುಂಚನೂರ ಗ್ರಾಪಂ ನಿಂದ 10,000 ರೂ., ಚುಂಚನೂರ ಪಿಕೆಪಿಎಸ್ ನಿಂದ 25,000 ರೂ., ಚುಂಚನೂರ ಗ್ರಾಪಂ ಅಧ್ಯಕ್ಷ ವೈಯಕ್ತಿಕವಾಗಿ 10,000 ರೂ., ಕಟಕೋಳ ಪಿಕೆಪಿಎಸ್ನಿಂದ 25,000 ರೂ. ಪರಿಹಾರ ಧನವನ್ನು ಶಾಸಕ ಯಾದವಾಡ ಅವರಿಗೆ ಹಸ್ತಾಂತರಿಸಲಾಯಿತು.
ತಾಲೂಕು ವೈದ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ, ಧನಲಕ್ಷ್ಮೀ ಶುಗರ್ಸ್ ಉಪಾಧ್ಯಕ್ಷ ಜಿ.ಜಿ.ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಸ್.ಢವಣ, ಪಿಕೆಪಿಎಸ್ ಅಧ್ಯಕ್ಷ ಎಂ.ಎಂ. ಆತಾರ, ತಹಸೀಲ್ದಾರ್ ಗಿರೀಶ ಸ್ವಾದಿ, ತಾಪಂ ಇಒ ಮುರಳೀದರ ದೇಶಪಾಂಡೆ ಇತರರಿದ್ದರು.