ಸವಣೂರ: ಕೇಸರಿ ಧ್ವಜ ತೆರವುಗೊಳಿಸುವ ಹುನ್ನಾರದ ಮೂಲಕ ತಾಲೂಕಿನ ಕಾರಡಗಿ ಗ್ರಾಮದಲ್ಲಿ ಕೋಮು ಗಲಭೆಗೆ ಸಂಚು ರೂಪಿಸಿದವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಶ್ರೀರಾಮ ಸೇನೆ ಪದಾಧಿಕಾರಿಗಳು ತಾಲೂಕಿನ ಹುಲಗೂರ ಪೊಲೀಸ್ ಠಾಣೆ ಪಿಐ ಪರಶುರಾಮ ಕಟ್ಟಿಮನಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದ್ದಾರೆ.
ಗ್ರಾಮದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ರಬ್ಬಾನಿ ಸವಣೂರ ನೇತೃತ್ವದ ತಂಡ ಗ್ರಾಮದ ಸರ್ಕಾರಿ ಶಾಲೆಯ ಸಮೀಪದಲ್ಲಿರುವ ಕೇಸರಿ ಧ್ವಜ ತೆರವಿನ ಮೂಲಕ ಶಾಂತಿ ಕದಡಲು ಹಾಗೂ ಕೋಮು ಗಲಭೆಗೆ ಸಂಚು ರೂಪಿಸಿದ್ದಾರೆ. ಇದರಲ್ಲಿ ಮಾಜಿ ಶಾಸಕ ಸೈಯ್ಯದ್ ಅಜೀಮ್ಪೀರ್ ಖಾದ್ರಿ, ಕಾಂಗ್ರೆಸ್ ಮುಖಂಡ ಯಾಸೀರಖಾನ್ ಪಠಾಣ, ಇನ್ನೂ ಅನೇಕರ ಹೆಸರು ಕೇಳಿಬರುತ್ತಿದೆ. ಆದ್ದರಿಂದ ಈ ಕುರಿತು ಕೂಡಲೇ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ತಪ್ಪಿದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಉದ್ವಿಗ್ನ ಸ್ಥಿತಿ
ಕೋಮು ಗಲಭೆಗೆ ಸಂಚಿನ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಕಾರಡಗಿ ಗ್ರಾಮದಲ್ಲಿರುವ ಕೇಸರಿ ಧ್ವಜ ತೆರವಿಗೆ ಸಂಚು ರೂಪಿಸಿದ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ. ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
> ಪರಶುರಾಮ ಕಟ್ಟಿಮನಿ, ಪಿಐ ಹುಲಗೂರ ಠಾಣೆಕಾರಡಗಿ ಗ್ರಾಮದಲ್ಲಿ ಕೋಮುಗಲಭೆಗೆ ಸಂಚು ರೂಪಿಸಿ, ರಾಜಕೀಯ ಮುಖಂಡರ ನೆರವು ಪಡೆಯುವ ಕುರಿತು ಸ್ಥಳೀಯ ಅಂಜುಮನ್ ಸಂಸ್ಥೆಯ ಅಧ್ಯಕ್ಷ ರಬ್ಬಾನಿ ಸವಣೂರ ಮಾತನಾಡಿದ್ದಾರೆ. ಇಂತಹ ಕೃತ್ಯಕ್ಕೆ ಕೂಡಲೇ ಕಡಿವಾಣ ಹಾಕಬೇಕು.
> ಗದಿಗೆಪ್ಪ ಕುರವತ್ತಿ, ಶ್ರೀರಾಮ ಸೇನೆ ಧಾರವಾಡ ವಿಭಾಗ ಅಧ್ಯಕ್ಷ