ಮುಂಬೈ: ಬ್ಯಾಂಕ್ ಖಾತೆಗಳ ಕೆವೈಸಿ (ಗ್ರಾಹಕರ ಅಗತ್ಯ ಮಾಹಿತಿ) ನಿಯಮ ಪಾಲಿಸದ ವ್ಯಕ್ತಿಗಳಿಗೆ ಹೊಸ ವರ್ಷದಲ್ಲಿ ಶಾಕ್ ಕಾದಿದೆ. ಇಂಥವರ ಖಾತೆಯನ್ನು ಬ್ಯಾಂಕ್ಗಳು ನಿಷ್ಕ್ರಿಯಗೊಳಿಸುವ ಸಾಧ್ಯತೆ. ಆರ್ಬಿಐ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ನಿಯಮ ಜ.1ರಿಂದಲೇ ಜಾರಿಗೆ ಬರಲಿದೆ.
ದೇಶದಲ್ಲಿ ಲಕ್ಷಾಂತರ ಬ್ಯಾಂಕ್ ಖಾತೆಗಳು ಇನ್ನೂ ಅಗತ್ಯ ಕೆವೈಸಿ ನಿಯಮ ಪಾಲನೆ ಮಾಡಿಲ್ಲ. ವೈಯಕ್ತಿಕ ಖಾತೆಗಳ ಜತೆಗೆ ದೊಡ್ಡ ಹಣಕಾಸು ಸಂಸ್ಥೆಗಳ ಖಾತೆಗಳೂ ಇದರಲ್ಲಿ ಸೇರಿವೆ ಎನ್ನಲಾಗಿದೆ. ಕೆವೈಸಿ ಕಡ್ಡಾಯ ನಿಯಮವನ್ನು ಆರ್ಬಿಐ ಈ ಹಿಂದೆಯೇ ಜಾರಿ ಮಾಡಿದೆ. ಕೆವೈಸಿ ಆಗದ ಖಾತೆಗಳನ್ನು ಸ್ಥಗಿತ ಮಾಡಲು ಹಲವು ತಿಂಗಳ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ ಕರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಈ ಆದೇಶವನ್ನು ಡಿ. 31ರ ವರೆಗೆ ಮುಂದೂಡಿತ್ತು. ಈಗ ಅವಧಿ ಮುಕ್ತಾಯ ವಾಗುತ್ತಿದ್ದು, ಲಕ್ಷಾಂತರ ಖಾತೆಗಳು ಕ್ರಮ ಎದುರಿಸುವ ಸಾಧ್ಯತೆ ಇದೆ.
ಯಾಕೆ ನಿಯಮ?: ಹಣಕಾಸು ಅಕ್ರಮಗಳನ್ನು ನಿಯಂತ್ರಿಸಲು ಆರ್ಬಿಐ ಈ ನಿಯಮ ರೂಪಿಸಿದೆ. ಬೇನಾಮಿ, ನಕಲಿ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ತಡೆ ಇನ್ನಿತರ ಉದ್ದೇಶಕ್ಕೆ ಖಾತೆದಾರರ ಪೂರ್ಣ ವಿವರ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಖಾತೆದಾರರ ಅಧಿಕೃತ ಗುರುತು, ವಿಳಾಸ, ಪ್ಯಾನ್, ಆಧಾರ್ ಸಂಖ್ಯೆ ಇನ್ನಿತರ ವಿವರವನ್ನು ಬ್ಯಾಂಕ್ಗಳಿಗೆ ನೀಡಬೇಕಿದೆ.
ಮೋಸದ ಕರೆಗೆ ಎಚ್ಚರ: ಕೆವೈಸಿ ನೆಪದಲ್ಲಿ ಹಣ ಲಪಟಾಯಿಸುವ ಸೈಬರ್ ಕಳ್ಳರ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು. ದೂರವಾಣಿ ಮೂಲಕವೇ ಪಾಸ್ವರ್ಡ್, ಎಟಿಎಂ ಪಿನ್, ಸಿವಿವಿ ಸಂಖ್ಯೆಗಳನ್ನು ಪಡೆದು ಖಾತೆಯಿಂದ ಹಣ ದೋಚುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಗ್ರಾಹಕರು ಈ ಬಗ್ಗೆ ಜಾಗೃತಿ ಹೊಂದುವುದು ಅಗತ್ಯ.
ಯಾರಿಗೆ ಅಗತ್ಯ?: ಸಾಮಾನ್ಯ ಉಳಿತಾಯ ಖಾತೆಗಳನ್ನು ಹೊಂದಿ ರುವ ವ್ಯಕ್ತಿಗಳು ನಿಯಮ ಪ್ರಕಾರ 10 ವರ್ಷಕ್ಕೆ ಒಮ್ಮೆ ಕೆವೈಸಿ ಅಪ್ಡೇಟ್ ಮಾಡಿದರೆ ಸಾಕು. ಖಾತೆ ತೆರೆಯುವಾಗಲೇ ಪೂರ್ಣ ಕೆವೈಸಿ ಪ್ರಕ್ರಿಯೆ ಮುಗಿಸಿದ್ದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅತ್ಯಧಿಕ ಮೊತ್ತದ ವಹಿವಾಟು ಹೊಂದಿರುವ, ಹೈರಿಸ್ಕ್ ಎಂದು ಪರಿಗಣಿಸಲಾಗುವ ಖಾತೆಗೆ 2 ವರ್ಷಕ್ಕೊಮ್ಮೆ ಕೆವೈಸಿ ದಾಖಲೆ ನೀಡಬೇಕು.
ಗ್ರಾಹಕರೇನು ಮಾಡಬೇಕು?: ಕೆವೈಸಿ ಆಗದ ಖಾತೆದಾರರು ಸಮೀಪದ ಬ್ಯಾಂಕ್ ಶಾಖೆಗಳನ್ನು ಸಂರ್ಪಸಬಹುದು. ಪ್ರಸ್ತುತ ಬಹುತೇಕ ಬ್ಯಾಂಕ್ಗಳು ಆನ್ಲೈನ್ ಮೂಲಕವೇ ಕೆವೈಸಿ ಪ್ರಕ್ರಿಯೆ ನಡೆಸುತ್ತಿವೆ. ವೀಡಿಯೊ ಕಾಲ್, ಇ ಮೇಲ್, ಬ್ಯಾಂಕುಗಳ ಅಧಿಕೃತ ವೆಬ್ಸೈಟ್ ಮೂಲಕವೂ ದಾಖಲೆಗಳನ್ನು ನೀಡಬಹುದು.
ಅವನಿಂದ ಅವಳಿಗೆ ಕರಿಮಣಿ ಪ್ರಯೋಗ; ಮಾವನ ಮನೆಯಲ್ಲಿ ಆತನಿಗೇ ಕತ್ತರಿ ಪ್ರಯೋಗ; ತಪ್ಪಿಹೋಯ್ತು ಸಂಸಾರದ ವ್ಯಾಕರಣ!
ಸಾರ್ವಜನಿಕರೇ ಹುಷಾರು.. ಈಗಾಗಲೇ ಜಗತ್ತಿನಲ್ಲಾಗಿದೆ ಕರೊನಾ ನಾಲ್ಕನೇ ಅಲೆ ಶುರು!