ಕೊಳ್ಳೇಗಾಲ: ಪಟ್ಟಣದ ಮುಡಿಗುಂಡ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿ ಅಭಿಜಿತ್ ಟಿ.ನಾಯಕ್ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಅಥ್ಲೆಟಿಕ್ ರಾಜ್ಯ ಮಟ್ಟದ ಕ್ರೀಡಾಕೂಟದ ಚಕ್ರ ಎಸೆತ( ಡಿಸ್ಕಸ್ ಥ್ರೋ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧಕ ವಿದ್ಯಾರ್ಥಿ ಅಭಿಜಿತ್ ಸೆ.29 ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ 16 ವಯೋಮಾನದ ಬಾಲಕರ ವಿಭಾಗಕ್ಕೆ ನಡೆದ ಕರ್ನಾಟಕ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ಷಿಪ್ ಕ್ರೀಡಾಕೂಟದಲ್ಲಿ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಪಾಲ್ಗೊಂಡು 39.34 ಮೀ. ದೂರ ಎಸೆದು ಸಾಧನೆಗೈದಿದ್ದು ಪ್ರಥಮ ಸ್ಥಾನ ಪಡೆದಿದ್ದಾರೆ. ಎಎಫ್ಐ (ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ) ತರಬೇತುದಾರರಾದ ಶಿವು ಅವರ ಮಾರ್ಗದರ್ಶನದಿಂದಾಗಿ ಅಭಿಜಿತ್ ಸಾಧನೆಗೈದಿದ್ದಾರೆ. ತೆಲಂಗಣದಲ್ಲಿ ನವೆಂಬರ್ ತಿಂಗಳಲ್ಲಿ ಅಮೆಚುರ್ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನಡೆಯುವ ರಾಷ್ಟ್ರ ಮಟ್ಟದ ಡಿಸ್ಕಸ್ ಥ್ರೋ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಅಭಿಜಿತ್ ಕೊಳ್ಳೇಗಾಲ ತಾಲೂಕಿನ ಕುಂತೂರು ಮೋಳೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ.ತುಳಸಿಯನ್ ಮತ್ತು ದೊಡ್ಡಿಂದುವಾಡಿ ಸರ್ಕಾರಿ ಶಾಲೆಯ ಶಿಕ್ಷಕಿ ಪ್ರಮಿಳಾ ಬಾಯಿ ದಂಪತಿ ಪುತ್ರ. ಅಭಿಜಿತ್ ಸಾಧನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಬಿಆರ್ಸಿ ಮಹದೇವಕುಮಾರ್ ಮತ್ತು ಆದರ್ಶ ಶಾಲೆಯ ಶಿಕ್ಷಕ ವೃಂದ ಮತ್ತು ಮಹದೇಶ್ವರ ಸ್ನೇಹ ಬಳಗದ ಅಧ್ಯಕ್ಷ ಶಾಂತರಾಜು, ಪದಾಧಿಕಾರಿಗಳಾದ ಉಮೇಶ್, ರಾಜು, ಮಲ್ಲರಾಜು, ರಂಗಸ್ವಾಮಿ, ನಂಜುಂಡೇಗೌಡ, ಗುರುಸ್ವಾಮಿ ಶ್ರೀನಿವಾಸ್, ಬಾಲು, ಬಾಲಕೃಷ್ಣೇಗೌಡ, ಸಂತೋಷ್ ಅಭಿನಂದಿಸಿದ್ದಾರೆ