ನವದೆಹಲಿ: ಆತ್ಮನಿರ್ಭರ ಭಾರತದಲ್ಲಿ ವಿಜ್ಞಾನದ ಕೊಡುಗೆ ಅಪಾರವಾಗಿದ್ದು, ಲ್ಯಾಬ್ ಟು ಲ್ಯಾಂಡ್ ಎಂಬ ಮಂತ್ರದೊಂದಿಗೆ ವಿಜ್ಞಾನವನ್ನು ಇನ್ನು ಮುಂದಕ್ಕೆ ಕೊಂಡೊಯ್ಯಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.
74ನೇ ಆವೃತ್ತಿಯ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಈ “ಮಾಘ್’ ತಿಂಗಳಲ್ಲಿ ಹರಿದ್ವಾರದಲ್ಲಿ ಕುಂಭಮೇಳ ಆಯೋಜಿಸಲಾಗುತ್ತಿದೆ. ಮಾರ್ಚ್ 22ರಂದು ವಿಶ್ವ ಜಲ ದಿವಸ ಆಚರಣೆ ಮಾಡಲಿದ್ದೇವೆ. ‘ಮಾಘ್’ ತಿಂಗಳನ್ನು ನೀರಿನೊಂದಿಗೆ ಸಂಯೋಜಿಸುವುದು ಎಂದರೆ, ಈ ತಿಂಗಳ ಚಳಿಗಾಲದ ನಂತರ ಬೇಸಿಗೆ ಪ್ರಾರಂಭವಾಗುತ್ತದೆ. ಹೀಗಾಗಿ ನಾವೆಲ್ಲೆರೂ ನೀರಿನ ಸಂರಕ್ಷಣೆ ಮಾಡಬೇಕಿದೆ. ಅಭಿವೃದ್ಧಿ ಕಾರ್ಯಗಳಿಗೆ ನೀರು ಬಹಳ ಅಗತ್ಯ. ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಪ್ರಧಾನಿ ಮೋದಿ ಹೇಳಿದರು.
ನೀರಿನ ಸಂರಕ್ಷಣೆ ಕಡೆಗಿರುವ ನಮ್ಮ ಜವಾಬ್ದಾರಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಇನ್ನು ಕೆಲವು ದಿನಗಳಲ್ಲಿ ಕ್ಯಾಚ್ ದಿ ರೈನ್ (ಮಳೆ ನೀರನ್ನು ಹಿಡಿಯಿರಿ) ಎಂದು ಅಭಿಯಾನವನ್ನು ಆರಂಭಿಸುತ್ತದೆ. ಕ್ಯಾಚ್ದಿ ರೈನ್ ಎಂಬುದ ಈ ಅಭಿಯಾನದ ಘೋಷ ವಾಕ್ಯ ಆಗಲಿದೆ ಎಂದರು.
ಇಂದು ರಾಷ್ಟ್ರೀಯ ವಿಜ್ಞಾನ ದಿನ. ಇದನ್ನು ವಿಜ್ಞಾನಿ ಡಾ.ಸಿ.ವಿ.ರಾಮನ್ ಅವರ ‘ರಾಮನ್ ಎಫೆಕ್ಟ್’ ಆವಿಷ್ಕಾರಕ್ಕೆ ಸಮರ್ಪಿಸಲಾಗಿದೆ. ನಮ್ಮ ಯುವಕರು ಭಾರತೀಯ ವಿಜ್ಞಾನಿಗಳ ಬಗ್ಗೆ ಓದಬೇಕು ಮತ್ತು ಭಾರತೀಯ ವಿಜ್ಞಾನದ ಇತಿಹಾಸವನ್ನು ಅರ್ಥೈಸಿಕೊಳ್ಳಬೇಕು ಎಂದರು.
ಆತ್ಮನಿರ್ಭರ ಭಾರತದಲ್ಲಿ ವಿಜ್ಞಾನದ ಕೊಡುಗೆ ಅಪಾರವಾಗಿದೆ. ಲ್ಯಾಬ್ ಟು ಲ್ಯಾಂಡ್ ಎಂಬ ಮಂತ್ರದೊಂದಿಗೆ ವಿಜ್ಞಾನವನ್ನು ಇನ್ನು ಮುಂದಕ್ಕೆ ಕೊಂಡೊಯ್ಯಬೇಕಿದೆ. ಉದಾಹರಣೆಗೆ, ಲಡಾಖ್ನ ಉರ್ಗೆನ್ ಫುಂಟ್ಸಾಗ್ ಪ್ರದೇಶದಲ್ಲಿ 20 ವಿಭಿನ್ನ ಬೆಳೆಗಳನ್ನು ಸಾವಯವವಾಗಿ ಆವರ್ತಕ ಮಾದರಿಯಲ್ಲಿ ಬೆಳೆಯಲು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ದೇಶಾದ್ಯಂತ ಅನೇಕ ಜನರು ಆತ್ಮನಿರ್ಭರ್ ಭಾರತಕ್ಕೆ ನೆರವು ನೀಡುತ್ತಿದ್ದಾರೆ. ದೆಹಲಿಯ ಎಲ್ಇಡಿ ಬಲ್ಬ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಬಿಹಾರದ ಬೆಟ್ಟಯ್ನ ಪ್ರಮೋದ್ಜಿ, ಬಲ್ಬ್ ಉತ್ಪಾದನೆಯ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಂಡು ಎಲ್ಇಡಿ ಬಲ್ಬ್ನ ಸಣ್ಣ ತಯಾರಿಕ ಘಟಕವನ್ನು ತನ್ನ ತವರಿನಲ್ಲಿ ಸ್ಥಾಪಿಸಿದ್ದಾರೆಂದು ಉದಾಹರಣೆಯನ್ನು ನೀಡಿದರು.