ಧಾರವಾಡ: ಕರೊನಾ ಸಮಯದಲ್ಲಿನ ಮಾಸಿಕ ಪ್ರೋತ್ಸಾಹ ಧನ ವಿತರಣೆ ಮತ್ತಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕಲಾಭವನ ಮೈದಾನದಿಂದ ಜಿಲ್ಲಾ ಪಂಚಾಯಿತಿ ಕಚೇರಿಗೆ ಆಗಮಿಸಿದ ಕಾರ್ಯಕರ್ತೆಯರು, ಇಲಾಖೆ ಆದೇಶದಂತೆ ಇ-ಸಂಜೀವಿನಿ, ಎನ್ಸಿಡಿ ಸರ್ವೆ, ಇ-ಸಮೀಕ್ಷೆ ಕೆಲಸಗಳನ್ನು ಆಶಾಗಳಿಂದ ಒತ್ತಾಯ ಪೂರ್ವಕವಾಗಿ ಮಾಡಿಸುವುದನ್ನು ಕೈಬಿಡಬೇಕು. ಸೆಪ್ಟೆಂಬರ್ನಿಂದ ಈವರೆಗೆ ಕರೋನಾ ಕೆಲಸದ ಪ್ರೋತ್ಸಾಹ ಧನ ಬಾಕಿ ಪಾವತಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದೊಳಗೆ ರಾಜ್ಯ ಹಾಗೂ ಕೇಂದ್ರದ ಪ್ರೋತ್ಸಾಹ ಧನ ನೀಡಬೇಕು. ಆಶಾಗಳಿಗೆ ನಿಗದಿಪಡಿಸಿದ ಕ್ಷೇತ್ರದಲ್ಲಿ ಮಾತ್ರ ಕೆಲಸ ಮಾಡಬೇಕು. ಬೇರೆ ಪ್ರದೇಶಗಳಿಗೆ ನಿಯೋಜಿಸುವಂತಿಲ್ಲ ಎನ್ನುವ ಆದೇಶ ಪಾಲಿಸಬೇಕು ಎಂದು ಒತ್ತಾಯಿಸಿದರು.
ಕರೊನಾ ಮೊದಲ ಅಲೆಯಲ್ಲಿ ರಾಜ್ಯ ಸರ್ಕಾರ ಘೊಷಿಸಿದ ವಿಶೇಷ ಪ್ರೋತ್ಸಾಹ ಧನ 3000 ರೂ. ಅನೇಕರಿಗೆ ತಲುಪಿಲ್ಲ. ಈ ಹಣ ಕೂಡಲೆ ಎಲ್ಲರಿಗೂ ತಲುಪಬೇಕು. 3 ತಿಂಗಳಿಗೊಮ್ಮ ಆಶಾ ಕಾರ್ಯಕರ್ತೆಯರ ಕುಂದುಕೊರತೆ ನಿವಾರಣೆ ಸಭೆಯನ್ನು ಸಂಘದ ಪದಾಧಿಕಾರಿಗಳೊಂದಿಗೆ ಕಡ್ಡಾಯವಾಗಿ ನಡೆಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.