ಮುಂಬೈ: ಕೆಲವು ತಿಂಗಳುಗಳ ಹಿಂದೆಯೇ ಈ ಕುರಿತು ಹಿಂಟ್ ಕೊಟ್ಟಿದ್ದರು ಆಮೀರ್ ಖಾನ್. ಆದರೆ, ಅವರು ಇಷ್ಟೊಂದು ಸೀರಿಯಸ್ ಆಗಿರಬಹುದು ಎಂದು ಯಾರೂ ಭಾವಿಸಿರಲಿಲ್ಲ. ಈಗ ನೋಡಿದರೆ, ಅವರು ನಟನೆಗೆ ವಿದಾಯ ಹೇಳುತ್ತಿರುವಂತೆ ಕಾಣುತ್ತಿದೆ. ಅದಕ್ಕೆ ಮುನ್ಸೂಚನೆಯಾಗಿ, ಅವರು ‘ಚಾಂಪಿಯನ್’ ಎಂಬ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ಲಾಲ್ ಸಿಂಗ್ ಛಡ್ಡಾ’ ನಂತರ ಆಮೀರ್, ಸ್ಪಾನಿಶ್ ಚಿತ್ರವೊಂದರ ಹಿಂದಿ ರೀಮೇಕ್ ಆದ ‘ಚಾಂಪಿಯನ್’ನಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ನಟನೆಯ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ವಹಿಸಿಕೊಳ್ಳುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಇದೀಗ ಅವರು ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬರೀ ಆ ಚಿತ್ರದ ನಿರ್ಮಾಪಕರಾಗಿರುವುದಾಗಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಅವರು ನಟನೆಗೆ ವಿದಾಯ ಹೇಳುತ್ತಾರಾ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ಇದನ್ನೂ ಓದಿ: ಡಿಂಗ್ರಿ ನಾಗರಾಜ್ ಮೇಲೆ ನಟಿಯ ಗಂಭೀರ ಆರೋಪ
ಇದಕ್ಕೂ ಮುನ್ನ ಕೆಲವು ತಿಂಗಳುಗಳ ಹಿಂದೆ, ಆಮೀರ್ ಖಾನ್ ರಿಟೈರ್ಮೆಂಟ್ ಬಗ್ಗೆ ಮಾತನಾಡಿದ್ದರು. ‘ಇಷ್ಟು ವರ್ಷ ಚಿತ್ರರಂಗದಲ್ಲೇ ಮುಳುಗಿ ಹೋಗಿದ್ದೆ. ನನ್ನ ಮಕ್ಕಳಿಗೇನು ಬೇಕು, ಅವರಿಗೇನು ಇಷ್ಟ ಇದ್ಯಾವುದೂ ನನಗೆ ಗೊತ್ತಿಲ್ಲ. ಒಂದು ಹಂತದಲ್ಲಿ ನನಗೆ ನನ್ನ ತಪ್ಪಿನ ಅರಿವಾದಾಗ ಬಹಳ ಸಿಟ್ಟು ಬಂತು. ನನ್ನ ಮತ್ತು ನನ್ನ ಕುಟುಂಬದವರ ನಡುವೆ ಈ ಬಿರುಕು ಮೂಡಿಸಿದ್ದೇ ಈ ಸಿನಿಮಾ. ಅದೇ ಕಾರಣಕ್ಕೆ ಇನ್ನು ಮುಂದೆ ನಾನು ನಟಿಸುವುದಿಲ್ಲ, ನಿರ್ಮಾಣವನ್ನೂ ಮಾಡುವುದಿಲ್ಲ ಎಂದು ನನ್ನ ಕುಟುಂಬದವರಿಗೆ ಸ್ಪಷ್ಟವಾಗಿ ಹೇಳಿಬಿಟ್ಟಿದ್ದೇನೆ’ ಎಂದು ಹೇಳಿಕೊಂಡಿದ್ದರು ಆಮೀರ್.
ಅವರ ಈ ನಿರ್ಧಾರ ಕೇಳಿ ಮನೆಯವರು ಬಹಳ ಬೇಸರಗೊಂಡರಂತೆ. ‘ಅವರು ಯಾವುದೇ ಕಾರಣಕ್ಕೂ ನನ್ನ ಈ ನಿರ್ಧಾರವನ್ನು ಒಪ್ಪುತ್ತಿಲ್ಲ. ಆದರೆ, ಮಾನಸಿಕವಾಗಿ ನಾನು ನಟನೆಯಿಂದ ದೂರಾಗಿದ್ದೇನೆ’ ಎಂದು ಆಮೀರ್ ಹೇಳಿದ್ದರು.
ಇದನ್ನೂ ಓದಿ: ಮೊದಲ ಬಾರಿ ಟೈಂ ಲೂಪ್ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ …
ಇದೀಗ ಅವರು ‘ಚಾಂಪಿಯನ್’ ಚಿತ್ರದಲ್ಲಿ ನಟಿಸುವುದರಿಂದ ಹಿಂದೆ ಸರಿದಿರುವುದರಿಂದ ಅವರು ನಟನೆಗೆ ಗುಡ್ಬೈ ಹೇಳುತ್ತಾರಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಆದರೆ, ಆಮೀರ್ ಖಾನ್ ಮಾತ್ರ ಇದ್ಯಾವುದನ್ನೂ ಸ್ಪಷ್ಟಪಡಿಸಿಲ್ಲ.
ನಟನೆ ಮಾಡದಿದ್ದರೂ, ಈ ಚಿತ್ರ ನಿರ್ಮಿಸುತ್ತಿರುವುದಕ್ಕೆ ಕಾರಣ ಚಿತ್ರದ ಕಥೆಯಂತೆ. ಈ ಕುರಿತು ಮಾತನಾಡಿರುವ ಆಮೀರ್, ‘ಇದೊಂದು ಅದ್ಭುತವಾದ ಕಥೆ. ನನಗೆ ಈ ಸಿನಿಮಾದಲ್ಲಿ ನಟಿಸುವುದಕ್ಕೆ ಇಷ್ಟವಿತ್ತು. ಆದರೆ, ನನಗೆ ಬ್ರೇಕ್ ಬೇಕೆಂದೆನಿಸುತ್ತಿದೆ. ನನಗೆ ನನ್ನ ತಾಯಿಯ ಜತೆಗೆ ಮತ್ತು ಮಕ್ಕಳ ಜತೆಗೆ ಸಮಯ ಕಳೆಯಬೇಕು ಎಂಬ ಆಸೆ. ಅದೇ ಕಾರಣಕ್ಕೆ ಚಿತ್ರದಲ್ಲಿ ನಟಿಸುತ್ತಿಲ್ಲ, ಬರೀ ನಿರ್ಮಾಣ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
‘ವಿಜಯಾನಂದ’ ಸಿನಿಮಾ ಹಾಡಿಗೆ ಅಭಿಮಾನಿಗಳು ಫಿದಾ… 2 ಕೋಟಿ ದಾಟಿದ ವ್ಯೂವ್ಸ್