ರೋಣ: ಮಳೆಯ ನೀರನ್ನು ವೃಥಾ ಹರಿಯಲು ಬಿಡುವ ಬದಲು ಅದನ್ನು ತಡೆದು ನಿಲ್ಲಿಸಬೇಕು. ನಿಂತ ನೀರನ್ನು ಭೂಮಿಯಲ್ಲಿ ಇಂಗಿಸಬೇಕು ಎಂದು ರಾಜಸ್ತಾನದ ಜಲತಜ್ಞ ಡಾ.ರಾಜೇಂದ್ರಸಿಂಗ್ ಹೇಳಿದರು.
ತಾಲೂಕಿನ ಮಲ್ಲಾಪುರ ಗ್ರಾಮದ ಮಾರುತಿ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಚಿಂತನ ಮಂಥನ ಸಭೆಯಲ್ಲಿ ಅವರು ಮಾತನಾಡಿದರು.
ಹೊಲಗಳ ಸುತ್ತಲೂ ಬದುವು ನಿರ್ಮಿಸಿ ಅಂತರ್ಜಲ ಹೆಚ್ಚಿಸಬೇಕು. ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಲಭ್ಯವಿರುವ ನೀರನ್ನು ದಕ್ಷತೆಯಿಂದ ಬಳಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಡಿ.ಆರ್. ಪಾಟೀಲ, ಗ್ರಾಮದ ಅಭಿವೃದ್ಧಿಗಾಗಿ ಅವಿಭಕ್ತ ಕುಟುಂಬದ ರೀತಿಯಲ್ಲಿ ಒಂದುಗೂಡಿ ಶ್ರಮಿಸಬೇಕು. ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಬೇಕು. ಜತೆಗೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಭೆ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ನೀರಿಗಾಗಿ ಯುದ್ಧ ಜರುಗುವ ಕಾಲ ಸನ್ನಿಹಿತವಾಗಿದ್ದು ಹಳೆಯ ಕೃಷಿ ಪದ್ಧತಿಯೊಂದಿಗೆ ಹೊಸ ಪದ್ಧತಿಯನ್ನು ಸೇರಿಸಿಕೊಂಡು ಕೃಷಿ ಮಾಡಬೇಕು. ನೀರಿನ ಪ್ರಾಮುಖ್ಯತೆ ಅರಿತು ಮಿತವಾಗಿ ಬಳಕೆ ಮಾಡುವ ಮೂಲಕ ವ್ಯವಸಾಯ ಮಾಡಬೇಕು ಎಂದರು.
ಹನಮಂತಗೌಡ ಹುಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಗುರುಪಾದಪ್ಪ ಕುರಟ್ಟಿ, ದಶರಥ ಗಾಣಿಗೇರ, ಶಂಕರಗೌಡ ಪಾಟೀಲ, ರಾಜು ಕಲಾಲ, ಬಸಣ್ಣ ನವಲಗುಂದ, ಸಿದ್ದು ಪಾಟೀಲ, ಡಾ. ವೀರೇಶ ಸತ್ತಿಗೇರಿ, ಎಂ.ವಿ. ಪಾಟೀಲ, ಶ್ರೀಶೈಲಪ್ಪ ನರಿಯವರು, ಕಂಬಳಿ ನೆಹರು, ಎಸ್.ಎಸ್. ಅರಹುಣಶಿ, ಶರಣಪ್ಪ ಕಳಿಗೊಣ್ಣವರ, ಗುರಣ್ಣ ಬಳಗಾನೂರ, ಸುರೇಶ ವತ್ತಟ್ಟಿ, ದಾನರಡ್ಡಿ, ನೀಲಪ್ಪಗೌಡ ದಾನಪ್ಪಗೌಡ್ರ ಇತರರಿದ್ದರು.