ಬೆಳಗಾವಿ: ರಾಜ್ಯ ಸರ್ಕಾರ ಸೈನಿಕರ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದ್ದು, ನಿವೃತ್ತ ಯೋಧರು ಹಾಗೂ ಹುತಾತ್ಮರ ಕುಟುಂಬ ಸದಸ್ಯರ ಕ್ಷೇಮಾಭಿವೃದ್ಧಿಗೆ ಬದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಳಗಾವಿಯ ಮರಾಠಿ ಲಘು ಪದಾತಿ ದಳ ಕೇಂದ್ರ(ಎಂಎಲ್ಐಆರ್ಸಿ)ದ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ವಿಜಯ ದಿವಸ’ ಕಾರ್ಯಕ್ರಮದಲ್ಲಿ ಭಾಗವಹಿಸಿ 1971ರ ಇಂಡೋ-ಪಾಕ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಮರ್ಪಿಸಿದರು. ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಸಿಡಿಎಸ್ ಬಿಪಿನ್ ರಾವುತ್ ಸೇರಿ 14 ಮಂದಿಗೂ ನುಡಿ ನಮನ ಸಲ್ಲಿಸಿದರು.
1971 ರ ಇಂಡೋ-ಪಾಕ್ ಯುದ್ಧದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು ಬಾಂಗ್ಲಾ ದೇಶ ಉದಯಕ್ಕೆ ಕಾರಣರಾದ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇಂಡೋ-ಪಾಕ್ ಯುದ್ಧವು ಚರಿತ್ರೆಯಲ್ಲಿ ಭಾರತದ ಶಕ್ತಿಗೆ ಸ್ಥಾನ ಒದಗಿಸಿದೆ. ದೇಶವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಇದು ನಮಗೆ ಮತ್ತಷ್ಟು ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.
ಸೇನೆಯು ದೇಶ ರಕ್ಷಣೆಯ ಜತೆಗೆ ಆಂತರಿಕ ಭದ್ರತೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಗಡಿಯಾಚೆಗಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದೆ. ಇಂಡೋ-ಪಾಕ್ ಯುದ್ಧವು ದೇಶದ ಮೂರೂ ಸೇನಾ ಪಡೆಗಳ ಕಾರ್ಯಕ್ಷಮತೆಗೆ ಸಾಕ್ಷಿ. 13 ದಿನಗಳ ಯುದ್ಧದಲ್ಲಿ ಅನೇಕ ಜನರು ಹುತಾತ್ಮರಾದರು. 90 ಸಾವಿರಕ್ಕೂ ಅಧಿಕ ಪಾಕಿಸ್ತಾನ ಸೈನಿಕರು ಶರಣಾದರು. ಈ ಯುದ್ಧ ಕಲೆಯು ಇಡೀ ಜಗತ್ತು ಭಾರತದ ಸೇನಾಶಕ್ತಿಯ ಕಡೆ ನೋಡುವಂತೆ ಆಯಿತು. ಈ ಯುದ್ಧದ ಬಳಿಕ ಭಾರತ ಸೇನೆ ಮತ್ತಷ್ಟು ಬಲಿಷ್ಟವಾಗಿದೆ ಎಂದರು.
ಭಾರತೀಯ ಸೇನೆಯಲ್ಲಿ ಅತ್ಯುತ್ತಮ ಸೇವೆ, ಸಾಹಸಕ್ಕೆ ನೀಡುವ ಶೌರ್ಯ, ಶೌರ್ಯೇತರ ಪ್ರಶಸ್ತಿ ವಿಜೇತರಿಗೆ ನೀಡುವ ಅನುದಾನದ ಮೊತ್ತವನ್ನು 6 ಪಟ್ಟು ಹೆಚ್ಚಳ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.
ಕರ್ನಾಟಕ ಮತ್ತು ಕೇರಳ ಉಪ ಕ್ಷೇತ್ರದ ಜನರಲ್ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್ ಜೆ.ವಿ.ಪ್ರಸಾದ್, ಡಿಜಿಪಿ ಪ್ರವೀಣ ಸೂದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು.
ಶಾಸಕ ಅನಿಲ್ ಬೆನಕೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಎಂ.ಎಲ್.ಐ.ಆರ್.ಸಿ. ಕಮಾಂಡಂಟ್ ಬ್ರಿಗೇಡಿಯರ್ ರೋಹಿತ್ ಚೌಧರಿ, ಹಿರಿಯ ಸೇನಾಧಿಕಾರಿಗಳು, ನಿವೃತ್ತ ಯೋಧರು ಇದ್ದರು.
ಪ್ರಶಸ್ತಿ ವಿಜೇತ ಸೈನಿಕರಿಗೆ ಸಹಿ ಸುದ್ದಿ: ಅನುದಾನ ಮೊತ್ತ 6 ಪಟ್ಟು ಏರಿಕೆ, ಯಾವುದಕ್ಕೆ ಎಷ್ಟು? ಇಲ್ಲಿದೆ ಡಿಟೇಲ್ಸ್