More

    ಯುವಜನರು ಜಾಗೃತರಾದರೆ ಬಲಿಷ್ಠ ಭಾರತ ನಿರ್ಮಾಣ

    ಸೋಮವಾರಪೇಟೆ: ಭಾರತದ ಭವಿಷ್ಯವಿರುವುದು ಯುವಶಕ್ತಿಗಳ ಕೈಯಲ್ಲಿ. ಯುವಕರು ಜಾಗೃತರಾದಾಗ ಮಾತ್ರ ಭಾರತ ಬಲಿಷ್ಠವಾಗುತ್ತದೆ ಎಂದು ಸೋಮವಾರಪೇಟೆ ತಹಸೀಲ್ದಾರ್ ಎಸ್.ಎನ್.ನರಗುಂದ ಅಭಿಪ್ರಾಯಪಟ್ಟರು.


    ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.


    ಪ್ರಜಾಪ್ರಭುತ್ವದ ಮೂಲ ಸಂವಿಧಾನವಾಗಿದೆ. ಸಂವಿಧಾನ ಓದಿ ಮನನ ಮಾಡಿಕೊಂಡವರಿಗೆ ಭಾರತದ ವೈಶಿಷ್ಟ್ಯ ಅರಿವಾಗುತ್ತದೆ. 1950ರ ಜನವರಿ 26ರಂದು ಸಂವಿಧಾನ ಜಾರಿಯಾಗುತ್ತದೆ. ಹಲವಾರು ಸವಾಲುಗಳು ಮತ್ತು ಕಷ್ಟಗಳ ಹೊರತಾಗಿಯೂ ಸಂವಿಧಾನ ಕರಡು ಸಮಿತಿಯೂ ಅದ್ಭುತವಾದ ಸಂವಿಧಾನವನ್ನು ನೀಡಿದೆ ಎಂದು ಹೇಳಿದರು.


    ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸೇವೆ ಅಮೋಘವಾದದ್ದು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ನ್ಯಾಯ ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯಗಳು. ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನ ಹಕ್ಕು ದೊರೆಯಲು 200 ವರ್ಷಗಳೇ ಬೇಕಾಯಿತು. ಆದರೆ, ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ದಿನವೇ ಮತದಾನದ ಹಕ್ಕು ಎಲ್ಲರಿಗೂ ಲಭಿಸಿದೆ. ಭಾರತೀಯರಾದ ನಾವೆಲ್ಲಾ ಸಂವಿಧಾನ ನಿಯಮಗಳನ್ನು ಉಲ್ಲಂಘಿಸಬಾರದು, ಪಾಲಿಸಬೇಕು ಎಂದು ಸಲಹೆ ನೀಡಿದರು.


    ಭಾರತಕ್ಕೆ ಸಂವಿಧಾನವನ್ನು ರಚಿಸಿಕೊಟ್ಟ ಕರಡು ಸಮಿತಿ ಅಧ್ಯಕ್ಷರಾದ ಡಾ.ಅಂಬೇಡ್ಕರ್ ಅವರ ಅದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಮುಖ್ಯ ಭಾಷಣ ಮಾಡಿದ ವಕೀಲ ಬಿ.ಇ.ಜಯೇಂದ್ರ ಹೇಳಿದರು.


    ಸಂವಿಧಾನ ಜಾರಿಯಾದ ದಿನದಿಂದ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಹಕ್ಕುಗಳು ಸಿಕ್ಕಿವೆ. ಈ ದೇಶದ ಪ್ರಜೆಗಳಾಗಿ ಕರ್ತವ್ಯಗಳನ್ನು ಪಾಲಿಸಬೇಕು. ಅಂಬೇಡ್ಕರ್ ಅವರ ಜಾತ್ಯತೀತ ರಾಷ್ಟ್ರದ ಕನಸನ್ನು ನನಸು ಮಾಡಬೇಕು ಎಂದು ತಿಳಿಸಿದರು.


    ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಎಚ್.ಸಿ.ನಾಗೇಶ್ ಮಾತನಾಡಿ, ದೇಶಕ್ಕೆ ಪರಿಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಪ್ರತಿಯೊಬ್ಬ ನಾಗರಿಕನು ಸಂವಿಧಾನದ ಪ್ರತಿಫಲವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಸಂವಿಧಾನವನ್ನು ಬರೆದ ಡಾ.ಅಂಬೇಡ್ಕರ್ ಅವರನ್ನು ಕೆಲ ಸಮುದಾಯದವರು ಮಾತ್ರ ನೆನೆದು ಪೂಜಿಸುವಂತಾಗಿದೆ. ಇದು ದೇಶದ ದುರಂತ ಎಂದು ವಿಶ್ಲೇಷಿಸಿದರು.


    5ನೇ ತರಗತಿಯ ಪಠ್ಯದಿಂದಲೇ ಅಂಬೇಡ್ಕರ್ ಪಠ್ಯ ಬರಬೇಕು. ಸಂವಿಧಾನವೂ ಪಠ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.


    ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಪಿ.ಎನ್.ಮುತ್ತಣ್ಣ, ಹವಾಲ್ದಾರ್ ಪೌತಿ ಬಿ.ವಿ.ನಾರಾಯಣ ಅವರ ಪತ್ನಿ ಎನ್. ಶಶಿಕಲಾ ರೈ ಅವರನ್ನು ಸನ್ಮಾನಿಸಲಾಯಿತು.
    ಪೊಲೀಸ್, ಜೈಜವಾನ್ ಮಾಜಿ ಸೈನಿಕರ ಸಂಘ ಹಾಗೂ ಶಾಲಾ ವಿದ್ಯಾರ್ಥಿಗಳ ತಂಡ ಪಥ ಸಂಚಲನ ನಡೆಸಿತು. ಕುವೆಂಪು ಶಾಲಾ ವಿದ್ಯಾರ್ಥಿನಿಯರು ರಾಷ್ಟ್ರಗೀತೆ, ಮಸಗೋಡು ಚನ್ನಮ್ಮ ಶಾಲಾ ವಿದ್ಯಾರ್ಥಿನಿಯರು ವಂದೇ ಮಾತರಂ, ಕ್ರಿಯೇಟಿವ್ ಶಾಲಾ ಅಕಾಡೆಮಿ ವಿದ್ಯಾರ್ಥಿಗಳು ನಾಡಗೀತೆ, ಸಾಂದೀಪನಿ ಶಾಲಾ ವಿದ್ಯಾರ್ಥಿಗಳು ರೈತಗೀತೆ ಹಾಡಿದರು. ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮ ಮನರಂಜಿಸಿತು. ವೇದಿಕೆಯಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎಸ್.ಗೀತಾ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಎನ್.ಎನ್.ರಮೇಶ್, ಚಂದ್ರಿಕಾ ಕುಮಾರ್, ಕವನ್ ಕಾರ್ಯಪ್ಪ, ಬಿಇಒ ಭಾಗ್ಯಮ್ಮ, ಇಒ ಜಯಣ್ಣ, ಸಿಒ ನಾಚಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್, ಪ್ರಾಂಶುಪಾಲ ಬೆಳ್ಳಿಯಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts