More

    ಹಾವಿನ ಪಕ್ಕದಲ್ಲೇ ಮಲಗಿ ಸಾವು ಗೆದ್ದ ಕಂದ! ಪಾಳುಬಾವಿಗೆ ಹಸುಗೂಸನ್ನು ಎಸೆದಿದ್ದ ಹೆತ್ತಮ್ಮ… ಮಂಡ್ಯದಲ್ಲಿ ಮನಕಲಕುವ ಘಟನೆ

    ಮಂಡ್ಯ: ಆಗ ತಾನೇ ಹುಟ್ಟಿದ ಗಂಡು ಮಗುವನ್ನು ಪಾಳು ಬಾವಿಗೆ ಹೆತ್ತಮ್ಮನೇ ಎಸೆದು ಹೋದ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಬಾವಿಯಲ್ಲಿ ಹಾವಿನ ಪಕ್ಕದಲ್ಲೇ ಮಲಗಿದ್ದ ಕಂದ ಸಾವನ್ನೇ ಗೆದ್ದು ಬಂದಿದೆ!

    ಹೆತ್ತಮ್ಮನೇ ಬೇಡವೆಂದು ಹಸುಗೂಸನ್ನು ಪಾಳು ಬಾವಿಗೆ ಎಸೆದಿದ್ದು, 50 ಅಡಿ ಆಳಕ್ಕೆ ಮಗು ಬಿದ್ದರೂ ಜೀವಂತವಾಗಿದೆ. ಬಾವಿಯಲ್ಲಿದ್ದ ವಿಷಜಂತುಗಳೂ ಆ ಮಗುವನ್ನ ಏನೂ ಮಾಡಿಲ್ಲ. ಸರಿಯಾಗಿ ಕಣ್ಣೇ ಬಿಟ್ಟಿಲ್ಲದ ಆ ಮಗು, ಅಳುತ್ತಿತ್ತು. ತೋಟಕ್ಕೆ ರೈತ ಮಹಿಳೆಯೊಬ್ಬರು ಹೋಗುವಾಗ ಬಾವಿಯಲ್ಲಿ ಮಗು ಅಳುವ ಶಬ್ದ ಕೇಳಿಸಿಕೊಂಡು ಬಾವಿಯತ್ತ ಇಣುಕಿ ನೋಡಿದ್ದಾರೆ. ಆಗ ಮಗು ಇರುವುದು ಗೊತ್ತಾಗಿದೆ. ಪಕ್ಕದಲ್ಲೇ ಹಾವು ಕೂಡ ಇದೆ!

    ಕೂಡಲೇ ರೈತ ಮಹಿಳೆ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಬಾವಿಗೆ ಇಳಿದ ಗ್ರಾಮಸ್ಥರು ಮಗುವನ್ನ ಮೇಲಕ್ಕೆತ್ತಿಕೊಂಡು ಬಂದಿದ್ದಾರೆ. ಬಳಿಕ ಗ್ರಾಮದ ಮಹಿಳೆಯೊಬ್ಬರು ಮಗುವಿಗೆ ಎದೆ ಹಾಲುಣಿಸಿ ಮಾನವೀಯತೆ ಮೆರೆದಿದ್ದಾರೆ. ಗ್ರಾಮದ ಮಹಿಳೆಯರು ಹಸುಗೂಸನ್ನು ಆರೈಕೆ ಮಾಡಿದ್ದು, ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಸ್ಥಳಕ್ಕೆ ಬಂದ ಸ್ಥಳೀಯ ಸರ್ಕಾರಿ ಆಸ್ಪತ್ರೆ ವೈದ್ಯರು ಮಂಡ್ಯ‌ ಮಿಮ್ಸ್ ಆಸ್ಪತ್ರೆ ಮಗುವನ್ನು ರವಾನಿಸಿದ್ದಾರೆ.

    ಇದೀಗ ಮಗುವಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಆರೋಗ್ಯವಾಗಿದ್ದು, ಪ್ರಾಣಾಪಾಯವಿಲ್ಲ. ಬಾವಿಗೆ ಎಸೆದಿದ್ದ ಕಾರಣ ಮಗುವಿನ ಬೆನ್ನ ಹಿಂದೆ ಸಣ್ಣಪುಟ್ಟ ಗಾಯವಾಗಿದೆ. 10ರಿಂದ 15 ದಿನ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾಗುವುದು ಎಂದು ಮಂಡ್ಯ ಮಿಮ್ಸ್ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್, ಮಂಡ್ಯ)

    ತುಮಕೂರಿನ ಮಹಿಳಾ ಪೇದೆ ಹಾಸನದಲ್ಲಿ ಶವವಾಗಿ ಪತ್ತೆ! ಅಕ್ಕನನ್ನೇ ಕೊಂದು ಲಾಡ್ಜ್​ನಲ್ಲಿ ದುರಂತ ಅಂತ್ಯ ಕಂಡ ತಮ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts