ಫಾರೂಕಾಬಾದ್: ಉತ್ತರ ಪ್ರದೇಶದ ಫಾರೂಕಾಬಾದ್ನಲ್ಲಿ ಪೊಲೀಸರ ಗುಂಡಿನೇಟಿಗೆ ಬಲಿಯಾಗಿದ್ದ ಅಪರಾಧಿಯ ಒಂದು ವರ್ಷದ ಮಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಫಾರೂಕಾಬಾದ್ನ ನಿವಾಸಿಯಾಗಿರುವ ಸುಭಾಷ್ ಬಾಥಮ್ 2001ರಲ್ಲಿ ಕೊಲೆ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದ. ಆತ ಜೈಲಿನಿಂದ ಬಿಡುಗಡೆಗೊಂಡು ಬಂದ ನಂತರ ಗ್ರಾಮಸ್ಥರು ಅವನೊಟ್ಟಿಗೆ ಸ್ನೇಹದಿಂದ ಇರಲಿಲ್ಲ ಎಂಬ ಸಿಟ್ಟಿನಲ್ಲಿ, ಆತ ಗ್ರಾಮದ ಮಕ್ಕಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದ. ತನ್ನ ಒಂದು ವರ್ಷದ ಮಗಳು ಗೌರಿಯ ಹುಟ್ಟು ಹಬ್ಬದ ನೆಪದಲ್ಲಿ ಗ್ರಾಮದ ಮಕ್ಕಳನ್ನು ಕರೆದು ಅವರನ್ನೆಲ್ಲ ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದ್ದ. ಪೂರ್ತಿ ರಾತ್ರಿ ಕಾರ್ಯಾಚರಣೆ ಮಾಡಿದ್ದ ಪೊಲೀಸರು, ಬಾಥಮ್ಗೆ ಗುಂಡು ಹಾರಿಸಿ, ಮಕ್ಕಳನ್ನು ಬಿಡಿಸಿಕೊಟ್ಟಿದ್ದರು. ಅದಾದ ನಂತರ ಗ್ರಾಮಸ್ಥರು ಮನೆಯೊಳಗಿದ್ದ ಆತನ ಹೆಂಡತಿಗೆ ಥಳಿಸಿದ್ದರು. ಆಕೆಯನ್ನು ಗ್ರಾಮಸ್ಥರಿಂದ ರಕ್ಷಿಸಿದ್ದ ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತ ಪಟ್ಟಿದ್ದಳು. ಇದೀಗ ಅಪರಾಧಿಯ ಮಗು ಅನಾಥವಾಗಿದ್ದು ಅದನ್ನು ತಾವು ಕಾನೂನು ಬದ್ಧವಾಗಿ ದತ್ತು ತೆಗೆದುಕೊಳ್ಳುವುದಾಗಿ ಕಾನ್ಪುರ ಪೊಲೀಸ್ನ ಹಿರಿಯ ಅಧಿಕಾರಿ ಮೋಹಿತ್ ಅಗರ್ವಾಲ್ ತಿಳಿಸಿದ್ದಾರೆ.
ದತ್ತು ವಿಚಾರವಾಗಿ ಮಾತನಾಡಿರುವ ಮೋಹಿತ್ ಅಗರ್ವಾಲ್, “ನಾನು ಗೌರಿಯ ವಿದ್ಯಾಭ್ಯಾಸ ಸೇರಿದಂತೆ ಎಲ್ಲ ಖರ್ಚನ್ನು ನೋಡಿಕೊಳ್ಳುತ್ತೇನೆ. ಕಾನೂನು ಬದ್ಧವಾಗಿ ದತ್ತು ತೆಗೆದುಕೊಂಡು, ಯಾವುದಾದರೂ ಒಳ್ಳೆಯ ಬೋರ್ಡಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸ ನೀಡಿಸುತ್ತೇನೆ.” ಎಂದು ತಿಳಿಸಿದ್ದಾರೆ.
ಸದ್ಯ ಗೌರಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನು ಸ್ವಲ್ಪ ದಿನಗಳಲ್ಲಿ ಮೋಹಿತ್ ಅಗರ್ವಾಲ್ ಅವರ ದತ್ತುಪುತ್ರಿಯಾಗಲಿದ್ದಾಳೆ. (ಏಜೆನ್ಸೀಸ್)