ಆಲೂರು: ಸ್ವಾವಲಂಬಿ ಜೀವನ ನಡೆಸಬೇಕಾದರೆ ಗ್ರಾಮೀಣ ಮಹಿಳೆಯರಿಗೆ ಕೌಶಲ ಅತ್ಯಗತ್ಯ ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು.
ಹರ್ಷಿತಾ ಸಂಸ್ಥೆ ಹಾಗೂ ನಬಾರ್ಡ್ ಆರ್ಥಿಕ ನೆರವಿನೊಂದಿಗೆ ಪಟ್ಟಣದ ರಾಜಪ್ಪ ಬಡಾವಣೆಯಲ್ಲಿ ಆಯೋಜಿಸಿದ್ದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡಾಗ ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ. ಕಾರ್ಮಿಕ ಶಕ್ತಿ, ಉದ್ಯಮಶೀಲತೆ ಮತ್ತು ನಾಯಕತ್ವದ ಪಾತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾದರೆ ದೇಶ ಸಮೃದ್ಧಿ ಹೊಂದುತ್ತದೆ ಎಂದರು.
ಹರ್ಷಿತ ಸಂಸ್ಥೆ ಅಧ್ಯಕ್ಷ ನಂಜುಂಡಪ್ಪ ಶೆಟ್ಟಿ ಮಾತನಾಡಿ, ತರಬೇತಿಗೆ ಬರುವವರಿಗೆ ಮಧ್ಯಾಹ್ನದ ಉಪಾಹಾರ ವ್ಯವಸ್ಥೆ ಕಲ್ಪಿಸಲಾಗುವುದು. ಜತೆಗೆ 90 ದಿನ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಬಾರ್ಡ್ ಡಿಡಿಎಂ ಸುವರ್ಣಾ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಲಲಿತಾ, ಉದ್ಯಮಿ ಗುರುಪ್ರಸಾದ್, ಎನ್.ನವೀನ್, ಲೋಕೇಶ್, ಪರಮೇಶ್ನಾಯಕ್ ಹಾಜರಿದ್ದರು.