ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಅಪ್ಪು ಬದುಕಿನ ಪಯಣ ಕುರಿತು ಕಿರುಚಿತ್ರ ಪ್ರದರ್ಶನ ಮಾಡುತ್ತಿದ್ದಂತೆ ಪತ್ನಿ ಅಶ್ವಿನಿ ಪುನೀತ್, ನಟ ಶಿವರಾಜ್ಕುಮಾರ್ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುತ್ತಿತ್ತು. ಅಲ್ಲಿ ನೆರೆದಿದ್ದ ಸಿನಿದಿಗ್ಗಜ್ಜರು, ಗಣ್ಯರು ಕಣ್ಣೀರು, ಚಿತ್ರರಂಗ ಮಾತ್ರವಲ್ಲ, ಟಿವಿಗಳಲ್ಲಿ ನೇರ ಪ್ರಸಾರ ನೋಡುತ್ತಿದ್ದ ಅಭಿಮಾನಿಗಳ ಮನಸುಗಳಲ್ಲೂ ನೋವಿನ ಭಾರ ಆವರಿಸಿ ಕಣ್ಣಂಚಲ್ಲೂ ನೀರು ಜಿನುಗಿತು.
ಕಿರುಚಿತ್ರ ಪ್ರದರ್ಶನ ಬಳಿಕ ಜ್ಯೋತಿ ಬೆಳಗಿ ದೀಪ ನಮನ ಜತೆಗೆ ಗೀತಗಾಯನ ಮೊಳಗಿತು. ನಾಗೇಂದ್ರ ಪ್ರಸಾದ್ ಅವರು ರಚಿಸಿದ ‘ಮುತ್ತು ರಾಜ ಹೆತ್ತ ಮುತ್ತೆ ಎತ್ತ ಹೋಯಿತೇ…’ ಗೀತೆ ಮತ್ತಷ್ಟು ಭಾವುಕವನ್ನಾಗಿಸಿತು. ಈ ವೇಳೆ ವಿದ್ಯುತ್ ದೀಪಗಳನ್ನು ಆರಿಸಲಾಗಿತ್ತು. ಕತ್ತಲಲ್ಲಿ ದೀಪ ಮಾತ್ರವೇ ಪ್ರಜ್ವಲಿಸುತ್ತಿತ್ತು. ಬಳಿಕ ಎಲ್ಲರೂ ಎದ್ದು ನಿಂತು ಮೌನಾಚಾರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಆ ವೇಳೆ ಸಾಕ್ಷತ್ ಅಪ್ಪು ಅವರೇ ಪರದೆಯಲ್ಲಿ ಮಾತನಾಡುತ್ತಿದ್ದಂತೆ ಭಾಸವಾಯ್ತು. ‘ಯಾಕೆ ಎಲ್ಲರೂ ಹೀಗಿದ್ದೀರಿ, ನಾನು ಎಲ್ಲೂ ಹೋಗಿಲ್ಲ, ನಿಮ್ಮೊಂದಿಗೇ ಇದ್ದೇನೆ…’ ಎಂದರು. ಪರದೆಯ ಮೇಲೆ ಕಂಡಂತಹ ಆ ಚಿತ್ರಣವನ್ನು ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿತ್ತು. ಇದಾದ ಬಳಿಕ ಗಣ್ಯರು ವೇದಿಕೆ ಬಳಿ ಇಟ್ಟ ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕರುನಾಡಿನ ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಕೊಡವುದಾಗಿ ಘೋಷಣೆ ಮಾಡಿದರು. ಡಾ.ರಾಜ್ಕುಮಾರ್ ಅವರ ಸ್ಮಾರಕಂದಂತೆ ಪುನೀತ್ ಅವರ ಸ್ಮಾರಕ ನಿರ್ಮಾಣ ಮಾಡುವುದಾಗಿಯೂ ಸಿಎಂ ಘೋಷಣೆ ಮಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪುನೀತ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನಿಡುವಂತೆ ಕೇಂದ್ರಕ್ಕೆ ರಾಜ್ಯದಿಂದ ಪ್ರಸ್ತಾವನೆ ಕಳಸಬೇಕು ಎಂದು ಮನವಿ ಮಾಡಿದರು. ಕೆಪಿಸಿಸಿ ಅಧ್ಯಕ್ಷೆ ಡಿಕೆಶಿ ಮಾತನಾಡಿ, ಪುನೀತ್ ಅವರ ಹೆಸರಿನಲ್ಲಿ ಸ್ಟುಡಿಯೋ ನಿರ್ಮಿಸಿ ಪ್ರತಿಭಾವಂತ ನಟರನ್ನು ಗುರುತಿಸುವ ಕಾರ್ಯ ಆಗಬೇಕು ಎಂದು ರಾಜ್ಯಸರ್ಕಾರಕ್ಕೆ ಸಲಹೆ ಕೊಟ್ಡರು.
ಮೈಸೂರಿನಿಂದ ಕಾರ್ಯಕ್ರಮಕ್ಕೆ ಬಂದಿದ್ದ ಶಕ್ತಿಧಾಮ ಕೇಂದ್ರದ ಮಕ್ಕಳು ಪುನೀತ್ ಕುರಿತು ಹಾಡು ಹಾಡುತ್ತಲೇ ಭಾವುಕರಾದರು. ಇದಾದ ಬಳಿಕ ತಮಿಳು ನಟ ವಿಶಾಲ್ ಮಾತನಾಡಿ, ‘ಪುನೀತ್ ರಾಜ್ಕುಮಾರ್ ನನ್ನ ಅಣ್ಣನಂತೆ. ಅವರ ಮುಖ ನನ್ನ ಎದುರು ಕಾಣಿಸ್ತಿದೆ. ನಾನು ಕೊಟ್ಟ ಮಾತನ್ನು ನಿಮ್ಮ ತಮ್ಮನಾಗಿ ಉಳಿಸಿಕೊಳ್ಳುವೆ ಪುನೀತ್ ಅಣ್ಣ. ನಾನು ಪ್ರಚಾರಕ್ಕಾಗಿಯೋ, ಮತ್ತ್ಯಾರನ್ನೋ ಮೆಚ್ಚಿಸಲು ಈ ಮಾತನ್ನು ಹೇಳುತ್ತಿಲ್ಲ. ನನಗೆ ಸ್ವಂತ ಮನೆ ಇಲ್ಲ, ಸ್ವಂತ ಮನೆ ಮಾಡಿಕೊಳ್ಳಲು ಹಣ ಎತ್ತಿಟ್ಟಿದ್ದೆ. ಪರವಾಗಿಲ್ಲ, ಮನೆಯನ್ನ ಮುಂದಿನ ಬಾರಿ ಮಾಡಿಕೊಳ್ಳುವೆ. ಪುನೀತ್ ನಡೆಸುತ್ತಿದ್ದ ಶಕ್ತಿಧಾಮವನ್ನು(Shaktidhama) ನೋಡಿಕೊಳ್ಳುವ ಜವಾಬ್ದಾರಿಯನ್ನು ಕೊಡಿ. ಕೊಟ್ಟ ಮಾತನ್ನ ಉಳಿಸಿಕೊಳ್ತೇನೆ’ ಎಂದು ಅಪ್ಪು ಕುಟುಂಬಸ್ಥರಲ್ಲಿ ಮನವಿ ಮಾಡಿದರು.
ತೆಲುಗು ನಟ ಮಂಚು ಮನೋಜ್ ಮಾತನಾಡಿ, ಪುನೀತ್ ಸರ್ ಅವರು ಜನರ ಮನಸ್ಸಲ್ಲಿ ವ್ಯಕ್ತಿತ್ವ ಬರೆದು ಹೋಗಿದ್ದಾರೆ. ಅಪ್ಪು ಸರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಶೀಘ್ರವೇ ಕೊಡಬೇಕು. ಎಲ್ಲ ಚಿತ್ರರಂಗದವರೂ ಕೇಂದ್ರಕ್ಕೆ ಪತ್ರ ಬರೆಯಿರಿ ಎಂದರು.
35 ದಿನಗಳ ಹಿಂದೆ ಪುನೀತ್ ಜತೆ ಒಟ್ಟಿಗೆ ಇದ್ವಿ. ಪುನೀತ್ ನನಗಾಗಿ ಅಡುಗೆ ತಂದಿದ್ದರು. ಅವರ ಸಾಧನೆ ಎಂದೂ ಶಾಶ್ವತ. ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ಕೊಡಬೇಕು ಎಂದು ಶರತ್ ಕುಮಾರ್ ಆಗ್ರಹಿಸಿದರು.
ನಟ ಜಗ್ಗೇಶ್ ಮಾತನಾಡಿ, ಡಾ.ರಾಜ್ ಕುಟುಂಬದಲ್ಲಿ ಇನ್ನು 22-23 ವರ್ಷದಲ್ಲಿ ಪುನೀತ್ರಾಜ್ಕುಮಾರ್ ರಂತೆ ಮತ್ತೊಬ್ಬ ಪವರ್ ಸ್ಟಾರ್ ಬರ್ತಾರೆ. ನಾವು ಅವರಲ್ಲೇ ಅಪ್ಪುನನ್ನು ಕಾಣವೇಕು ಎಂದು ಧೈರ್ಯ ತುಂಬಿದರು.
ರಾಜಕೀಯ ಮುಖಂಡರಾದ ಶರವಣ, ಆರ್. ಅಶೋಕ್, ಜಗ್ಗೇಶ್, ಮತ್ತಿತರರು ಮಾತಾಡಿದರು. ಕಾರ್ಯಕ್ರಮದ ಆರಂಭ ಮತ್ತು ನಡುನಡುವೆ ಸಾರಾ ಗೋವಿಂದು ಮಾತನಾಡಿದರು. ಕಾರ್ಯಕ್ರಮದ ಮಧ್ಯೆ ಮಧ್ಯೆ ಪುನೀತ್ ಅವರಿಗೆ ಗುರುಕಿರಣ್, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಹೇಮಂತ್ ಸೇರಿದಂತೆ ಖ್ಯಾತ ಗಾಯಕರು ಗಾಯನ ನಮನ ಸಲ್ಲಿಸುತ್ತಿದ್ದರು. ಗೀತನಮನ ಕಾರ್ಯಕ್ರಮ ಆರಂಭಕ್ಕೂ ಮುನ್ನ ಶ್ರೀಧರ್ ಸಾಗರ್(ಸಾಕ್ಸೋಫೋನ್) ಅವರ ಕಡೆಯಿಂದ ಸುಗಮ ಸಂಗೀತಸುಧೆ ಹರಿಯಿತು. (ಇದಿಷ್ಟು ಸಂಜೆ 6.30ರ ವರೆಗಿನ ಅಪ್ಡೇಟ್)
ಕಣ್ಣೀರ ಕಟ್ಟೆ ಒಡೆಯಿತು.. ವೇದಿಕೆಯಲ್ಲೇ ಬಿಕ್ಕಿಬಿಕ್ಕಿ ಅತ್ತ ಶಿವಣ್ಣ, ರಾಘಣ್ಣ: ಬಂದ್ಬಿಡು ಕಂದಾ.. ನಾನೇ ಹೋಗುವೆ
ನನ್ಗೆ ಸ್ವಂತ ಮನೆ ಇಲ್ಲ, ಮನೆಗೆಂದು ಹಣ ಎತ್ತಿಟ್ಟಿದ್ದೆ, ಪರವಾಗಿಲ್ಲ… ನನ್ಗೆ ಶಕ್ತಿಧಾಮ ಮಕ್ಕಳ ಜವಾಬ್ದಾರಿ ಕೊಡಿ…
‘ಪುನೀತ ನಮನ’ಕ್ಕೆ ಪ್ರವೇಶ ಸಿಕ್ಕಿಲ್ಲವೆಂದು ಬೇಸರ ಬೇಡ: ಅಭಿಮಾನಿಗಳಿಗಾಗೇ ಮತ್ತೊಂದು ಕಾರ್ಯಕ್ರಮ
ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ