ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಕಣ್ಣುಗಳನ್ನ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದವರು. ಅವರ ಕಣ್ಣುಗಳಿಂದ ಇಬ್ಬರಿಗಲ್ಲ, ನಾಲ್ವರ ಬದುಕಿಗೆ ಬೆಳಕು ಸಿಕ್ಕಿದೆ. ಪುನೀತ್ರ ಎರಡು ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬಂದಿದೆ ಎಂದು ನಾರಾಯಣ ನೇತ್ರಾಲಯ ಆಸ್ಪತ್ರೆ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ಮಾಹಿತಿ ನೀಡಿದ್ದಾರೆ.
ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿರುವ ನಾರಾಯಣ ನೇತ್ರಾಲಯದ ವೈದ್ಯರು ಸೋಮವಾರ ಕರುನಾಡ ಪ್ರೀತಿಯ ಅಪ್ಪುಗೆ ವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಪುನೀತ್ರ ಭಾವಚಿತ್ರಕ್ಕೆ ದೀಪ ಬೆಳಗಿ ನಮಿಸಿದರು. ಬಳಿಕ ಮಾತನಾಡಿದ ಭುಜಂಗಶೆಟ್ಟಿ, ನೇತ್ರದಾನದಿಂದ ನಾಲ್ವರ ಬಾಳಲ್ಲಿ ಅಪ್ಪು ಬೆಳಕಾಗಿದ್ದಾರೆ. ಶನಿವಾರ ಒಂದೇ ದಿನ ನಾಲ್ವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. 2 ಕಣ್ಣನ್ನು ಇಬ್ಬರಿಗೆ ಅಳವಡಿಸುವುದು ಸಾಮಾನ್ಯ. ಆದರೆ ಹೊಸ ತಂತ್ರಜ್ಞಾನ ಬಳಸಿ ಪುನೀತ್ರ 2 ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ನೀಡಲಾಗಿದೆ. ಎಲ್ಲರೂ ಕರ್ನಾಟಕದವರಾಗಿದ್ದು, ಆ ಪೈಕಿ ಓರ್ವ ಯುವತಿ ಮತ್ತು ಮೂವರು ಪುರುಷರು ಎಂದು ವಿವರಿಸಿದರು.
ಪುನೀತ್ರ ಕಣ್ಣುಗಳ ಕಾರ್ನಿಯಾಗಳನ್ನು ಎರಡು ಭಾಗ ಮಾಡಲಾಗಿತ್ತು. ಯಾರಿಗೆ ಮುಂಭಾಗದ ಕಾರ್ನಿಯಾ ಹಾನಿಯಾಗಿತ್ತೋ ಅವರಿಗೆ ಮುಂಭಾಗದ ಕಾರ್ನಿಯಾವನ್ನ ನೀಡಲಾಗಿದೆ. ಹಿಂಭಾಗದ ಆಳದ ಪದರವನ್ನ ಬೇರೆಯವರಿಗೆ ನೀಡಲಾಗಿದೆ. ಅಮದರೆ ಇಬ್ಬರಿಗೆ ಕಾರ್ನಿಯಾದ ಮುಂಭಾಗ ಜೋಡಿಸಲಾಯ್ತು. ಮತ್ತಿಬ್ಬರಿಗೆ ಕಾರ್ನಿಯಾದ ಹಿಂಭಾಗ ಜೋಡಣೆ ಮಾಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ದೃಷ್ಟಿ ಪಡೆದ ನಾಲ್ವರೂ ಆರೋಗ್ಯವಾಗಿದ್ದಾರೆ. ಕಣ್ಣಿನ ಮೇಲ್ಭಾಗದಲ್ಲಿ ಹೊಲಿಗೆ ಸಹಿತ ಶಸ್ತ್ರ ಚಿಕಿತ್ಸೆ ಇದಾಗಿದ್ದು, ಕಣ್ಣಿನ ಕೆಳಭಾಗದಲ್ಲಿ ಹೊಲಿಗೆ ಇಲ್ಲದೆಯೇ ಶಸ್ತ್ರಚಿಕಿತ್ಸೆ ನಡೆದಿದೆ ಎಂದು ಡಾ. ಭುಜಂಗ ಶೆಟ್ಟಿ ವಿವರಿಸಿದರು.
ಮಂತ್ರಾಲಯದಲ್ಲಿ ಪುನೀತ್ ಮಾತನಾಡುತ್ತಿರುವಾಗಲೇ ಅಲುಗಾಡಿದ್ದ ವೀಣೆ: ಸ್ಪಷ್ಟನೆ ನೀಡಿದ ಸುಭುದೇಂದ್ರ ಶ್ರೀಗಳು
ಬೆಂಗಳೂರಿಗೆ ಆಗಮಿಸಿದ ಪುನೀತ್ ಪುತ್ರಿ ಧೃತಿ: ನೋವಿನ ಭಾರ ಹೊತ್ತುಕಂಡೇ ಹೆಜ್ಜೆ ಹಾಕಿದ ಮಗಳು…