More

    ಕಲಾಪ ಬಹಿಷ್ಕರಿಸುವ ವಕೀಲರ ಅಮಾನತು ಕಾನೂನು ತಿದ್ದುಪಡಿಗೆ ಹೈಕೋರ್ಟ್ ಪ್ರಸ್ತಾಪ

    ಬೆಂಗಳೂರು: ವಿವಿಧ ಕಾರಣಗಳಿಂದಾಗಿ ರಾಜ್ಯದ ಯಾವುದೇ ನ್ಯಾಯಾಲಯಗಳಲ್ಲಿ ನಿರ್ದಿಷ್ಟ ಅವಧಿಗೆ ಕೋರ್ಟ್ ಕಲಾಪ ಬಹಿಷ್ಕರಿಸುವ ಅಥವಾ ಮುಷ್ಕರ ನಡೆಸುವ ವಕೀಲರ ನಡೆಯನ್ನು ನ್ಯಾಯದಾನ ಆಡಳಿತದಲ್ಲಿ ಹಸ್ತಕ್ಷೇಪವೆಂದು ಪರಿಗಣಿಸಿ, ಅಂತಹ ವಕೀಲರನ್ನು ಅಮಾನತುಗೊಳಿಸಲು ಕಾನೂನು ತಿದ್ದುಪಡಿಗೆ ಹೈಕೋರ್ಟ್ ಪ್ರಸ್ತಾಪಿಸಿದೆ.

    ಅದಕ್ಕಾಗಿ ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳ ತಿದ್ದುಪಡಿ ನಿಯಮ 2024 ಅನ್ನು ಹೈಕೋರ್ಟ್ ಬಿಡುಗಡೆ ಮಾಡಿದೆ. ಅದರಂತೆ ಹೈಕೋರ್ಟ್ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ವಕೀಲಿಕೆ ನಡೆಸುವವರು ಈ ಷರತ್ತಿಗೆ ಒಳಪಟ್ಟು ಅಲ್ಲಿ ವಕೀಲಿಕೆ ವೃತ್ತಿಯನ್ನು ನಡೆಸಬೇಕಾಗುತ್ತದೆ.

    ಕರಡು ನಿಯಮಗಳ ಪ್ರಕಾರ, ಯಾವುದೇ ವಕೀಲರು ಅವರ ಯಾವುದೇ ಸಮಸ್ಯೆ ಅಥವಾ ದೂರುಗಳಿದ್ದರೆ ವಕೀಲರ ಸಂಘಗಳ ಮೂಲಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ದೂರು ಇತ್ಯರ್ಥ ಸಮಿತಿ (ಜಿಆರ್‌ಸಿ)ಗೆ ಸಲ್ಲಿಸಬೇಕು. ಈ ‘ಜಿಆರ್‌ಸಿ’ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಅಡ್ವೊಕೇಟ್ ಜನರಲ್, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರು, ಹೈಕೋರ್ಟ್‌ನ ಆಡಳಿತ ನಿರ್ವಹಣೆ ಹೊಣೆ ಹೊತ್ತ ನ್ಯಾಯಮೂರ್ತಿ ಮತ್ತು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ.

    ಜಿಆರ್‌ಸಿಗೆ ವಕೀಲರ ಸಮಸ್ಯೆ ಅಥವಾ ದೂರುಗಳ ಬಗ್ಗೆ ಅಥವಾ ಮುಷ್ಕರ ಅಥವಾ ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಸಂಘದ ಪ್ರತಿನಿಧಿಗಳು ಸಮಾಲೋಚನೆ ನಡೆಸಿ, ಮುಷ್ಕರ ಅಥವಾ ಪ್ರತಿಭಟನೆ, ಬಹಿಷ್ಕಾರ ಹಾಕುವುದು ನ್ಯಾಯದಾನದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂಬುದರ ಕುರಿತು ಮನವರಿಕೆ ಮಾಡಿಕೊಡುತ್ತದೆ, ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ.

    ಒಂದು ವೇಳೆ ಜಿಆರ್‌ಸಿ ಸಲಹೆಯನ್ನು ವಕೀಲರ ಸಂಘಗಳು ಧಿಕ್ಕರಿಸಿದರೆ, ಜಿಆರ್‌ಸಿ ಅಂತಹ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಸೇರಿ ಇನ್ನಿತರ ಕ್ರಮಗಳನ್ನು ಜರುಗಿಸುವ ಕುರಿತು ಮುಖ್ಯ ನ್ಯಾಯಮೂರ್ತಿಗೆ ವರದಿ ಸಲ್ಲಿಸುತ್ತದೆ. ಒಮ್ಮೆ ನ್ಯಾಯಾಂಗ ನಿಂದನೆ ಕ್ರಮಗಳನ್ನು ಆರಂಭಿಸಿದರೆ, ಆಗ ನ್ಯಾಯಮೂರ್ತಿಗಳು ಅಂತಹ ವಕೀಲರನ್ನು ನಿರ್ದಿಷ್ಟ ಅವಧಿಗೆ ಅಮಾನತುಗೊಳಿಸಲು ಆದೇಶ ನೀಡಬಹುದು. ಅದೇ ರೀತಿ ನಿಯಮಗಳಲ್ಲಿ, ಮುಖ್ಯ ನ್ಯಾಯಮೂರ್ತಿಗೆ ವಕೀಲರ ಅಮಾನತು ವಾಪಸ್ ಪಡೆಯುವ ಅಧಿಕಾರವನ್ನೂ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts