ಬಾಳೆಹೊನ್ನೂರು: ಮಹಿಳಾ ದಿನಾಚರಣೆ ಅಂಗವಾಗಿ ದಿವ್ಯಭಾರತಿ ಮಹಿಳಾ ಮಂಡಳಿಯಿಂದ ಶುಕ್ರವಾರ ಪಟ್ಟಣದಲ್ಲಿ ಚಾಲಕಿಯರಿಂದ ವಿವಿಧ ವಾಹನಗಳ ಜಾಥಾ ನಡೆಸಲಾಯಿತು.
ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ವಾಹನಗಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ಪುರುಷರಿಗೆ ಸರಿ ಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆ ಸಬಲೆ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾಳೆ. ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ ಇನ್ನೂ ಹೆಚ್ಚಿನ ಅವಕಾಶ ದೊರೆಯಬೇಕಿದೆ ಎಂದರು.
ಕೊಪ್ಪ ರಸ್ತೆಯ ಸೀಗೋಡು ಕೆಫೆ ಮುಂಭಾಗದಿಂದ ಸ್ಕೂಟರ್, ಬೈಕ್, ಆಟೋ, ಗೂಡ್ಸ್ ಆಟೋ, ಕಾರು, ಪಿಕ್ಅಪ್ ವಾಹನ, ಜೀಪ್ಗಳನ್ನು ಚಾಲಕಿಯರು ಚಲಾಯಿಸಿಕೊಂಡು ಬಂದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಜೇಸಿ ವೃತ್ತ, ರೋಟರಿ ವೃತ್ತದ ಮೂಲಕ ತೆರಳಿ ಸರ್ಕಾರಿ ಪ್ರೌಢಶಾಲೆ ಕ್ರೀಡಾಂಗಣದ ಬಳಿ ಸಮಾಪ್ತಿಗೊಂಡಿತು. ಜಾಥಾದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಗುಲಾಬಿ ಬಣ್ಣದ ಪೇಟಗಳನ್ನು ತೊಟ್ಟಿದ್ದರು.
ದಿವ್ಯಭಾರತಿ ಮಹಿಳಾ ಮಂಡಳಿ ಅಧ್ಯಕ್ಷೆ ವಿಜಯಲಕ್ಷ್ಮೀ, ಕಾರ್ಯದರ್ಶಿ ವಿದ್ಯಾ ಶೆಟ್ಟಿ, ಇನ್ನರ್ವ್ಹೀಲ್ ಕ್ಲಬ್ ಕಾರ್ಯದರ್ಶಿ ಕಾಂಚನಾ ಸುಧಾಕರ್, ತಹಸೀನ್, ವೈಶಾಲಿ ಕುಡ್ವ, ವರ್ಷಾ ವೆಂಕಿ, ಕವಿತಾ, ರಜನಿ ದೇವಯ್ಯ, ವಿದ್ಯಾ ಪೈ, ಸುಮಿತ್ರಾ, ಶೈಲಜಾ ಇತರರಿದ್ದರು.