ಬಾಳೆಹೊನ್ನೂರು: ವಿದ್ಯಾರ್ಥಿಗಳು ದೈಹಿಕ, ಬೌದ್ಧಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆ ಉತ್ತಮವಾಗಬೇಕಾದರೆ ಧನಾತ್ಮಕವಾದ ಮನಃಸ್ಥಿತಿ ಹೊಂದುವುದು ಬಹಳ ಮುಖ್ಯ ಎಂದು ಶಿವಮೊಗ್ಗದ ಪೋದಾರ್ ಇಂಟರ್ನ್ಯಾಷನಲ್ ಸ್ಕೂಲ್ನ ಪ್ರಾಚಾರ್ಯ ಸುಖೇಶ್ ಸೇರಿಗಾರ್ ಹೇಳಿದರು.
ಸಮೀಪದ ಸೀಗೋಡು ಜವಾಹರ ನವೋದಯ ವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಮನಃಸ್ಥಿತಿ ಉತ್ತಮಗೊಳಿಸುವ ನಿಟ್ಟಿನಲ್ಲಿ 6 ಬಾರಿ ಒಲಿಂಪಿಕ್ಸ್ ಪದಕ ವಿಜೇತರಾದ ಕಾರ್ಲ್ ಲೂಯಿ ಮತ್ತು ಅವರ ಕೋಚ್ನ ಉದಾಹರಣೆಯನ್ನು ಗಮನಿಸಬೇಕು. ಒಂದು ಹದ್ದು ಹೇಗೆ ತನ್ನ ಗುರಿಯನ್ನು ತಲುಪಿ ತನ್ನ ಜೀವನ ಸಾರ್ಥಕ ಪಡಿಸಿಕೊಳ್ಳುತ್ತದೆ ಎಂಬ ನಿದರ್ಶನಗಳನ್ನು ವಿದ್ಯಾರ್ಥಿಗಳು ಗಮನಿಸಬೇಕಿದೆ ಎಂದರು.
2023-24ನೇ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ತರಗತಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪ್ರಾಚಾರ್ಯ ಆರ್.ಪ್ರೇಮ್ಕುಮಾರ್, ಉಪನ್ಯಾಸಕಿ ರಿತು ಶರ್ಮಾ, ಶಿಕ್ಷಕ ಸುರೇಶ್ ಬಾಬು ಇತರರಿದ್ದರು.