ದಾಂಡೇಲಿ: ನರ್ಸಿಂಗ್ ಕಾರ್ಯ ನಿರ್ವಹಿಸುವವರೆಗೆ ನರ್ಸ್ ಬದಲು ನರ್ಸಿಂಗ್ ಆಫೀಸರ್ ಎಂದು ಕರೆಯಲು ಸರ್ಕಾರ ತೀರ್ಮಾನಿಸಿದೆ ಎಂದು ರಾಜ್ಯ ಡಿಪ್ಲೊಮಾ ನರ್ಸಿಂಗ್ ಪರೀಕ್ಷೆ ಮಂಡಳಿ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ತಿಳಿಸಿದರು.
ಕೆಎಲ್ಇ ಸಂಸ್ಥೆಯ ವಿಮಲಾಬಾಯಿ ವಿಶ್ವನಾಥರಾವ್ ದೇಶಪಾಂಡೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾರ್ನಬಿಲ್ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ರಾಜ್ಯದ 900 ನರ್ಸಿಂಗ್ ಕಾಲೇಜುಗಳಲ್ಲಿ ರಾಜ್ಯಕ್ಕೆ ಮೊದಲ 10 ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲು ನಿರ್ಧರಿಸಲಾಗಿದೆ. ಇನ್ನು ಮುಂದೆ ನರ್ಸಿಂಗ್ ಕೋರ್ಸ್ ಮಾಡಿದವರನ್ನು ಕ್ಯಾಂಪಸ್ ಮೂಲಕ ಆಯ್ಕೆ ಮಾಡಲು ಬೆಂಗಳೂರಿನ ಬಾಲಗಂಗಾಧರ ಸ್ವಾಮೀಜಿ ವೈದ್ಯಕೀಯ ಆಸ್ಪತ್ರೆ ಹಾಗೂ ಇತರ ಸಂಸ್ಥೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಡಾ. ಅನಿಲಕುಮಾರ, ರಾಹುಲ ಬಾವಾಜಿ ಇದ್ದರು. ಹಾರ್ನ್ಬಿಲ್ ಹಬ್ಬದಲ್ಲಿ ಸಮಾಜ ಸೇವಕಿಯರಾಗಿ ಸೇವೆ ಸಲ್ಲಿಸಿದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾಲೇಜು ಪ್ರಾಂಶುಪಾಲ ವಿನಾಯಕ ಪಾಟೀಲ ಸ್ವಾಗತಿಸಿದರು. ಜ್ಯೋತಿ ಗಾವಡೆ, ರಜಿಕಾ ಮೊಳಕ, ಪ್ರಭಾವತಿ ಸಾವಂತ ಕಾರ್ಯಕ್ರಮ ನಡೆಸಿಕೊಟ್ಟರು.