ಮೈಸೂರು: ನಾಡಹಬ್ಬ ದಸರಾ ಹಿನ್ನೆಲೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಯುವ ದಸರಾದಲ್ಲಿ ‘ಅಪ್ಪು ಅಪ್ಪು… ಪುನೀತ್…’ ಎನ್ನುತ್ತಾ ಸಹಸ್ರಾರು ಅಭಿಮಾನಿಗಳು ಘೋಷಣೆ ಕೂಗುತ್ತಲೇ ಅಪ್ಪು ನೆನೆದು ಭಾವುಕರಾದರು. ಯುವ ದಸರಾದಲ್ಲಿ ಹಮ್ಮಿಕೊಂಡಿದ್ದ “ಅಪ್ಪು ನಮನ” ಕಾರ್ಯಕ್ರಮಕ್ಕೆ ಸಹಸ್ರಾರು ಅಭಿಮಾನಿಗಳು ಸಾಕ್ಷಿಯಾದರು. ಇಷ್ಟೊಂದು ಜನಸ್ತೋಮ ಯುವ ದಸರಾಗೆ ಸೇರಿದ್ದು ಇದೇ ಮೊದಲು. ಕಾರ್ಯಕ್ರಮದುದ್ದಕ್ಕೂ ಅಪ್ಪುವಿನ ಆರಾಧನೆ ಮಾಡಿದರು. ಅಪ್ಪು ಅಭಿನಯದ ‘ಗಂಧದಗುಡಿ’ ಚಿತ್ರದ ಟೀಸರ್ ಪ್ರದರ್ಶನದ ವೇಳೆ ಅಶ್ವಿನಿ ಪುನೀತ್ ರಾಜ್ಕುಮಾರ್ ಭಾವುಕರಾಗಿ ಕಣ್ಣೀರು ಸುರಿಸಿದರು. ಕಣ್ಣೀರಿಡುತ್ತಲ್ಲೇ ಕಾರಿನಲ್ಲಿ ತೆರಳಿದರು.
ಮಹಾರಾಜ ಕಾಲೇಜು ಮೈದಾನ ಬುಧವಾರ ಸಂಜೆಯೇ ಅಭಿಮಾನಿಗಳಿಂದ ತುಂಬಿ ಹೋಗಿತ್ತು. ರಾತ್ರಿ 9 ಗಂಟೆಯಾದರೂ ಸಾವಿರಾರು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದತ್ತ ಆಗಮಿಸುತ್ತಲೇ ಇದ್ದರು. ಯುವ ದಸರಾಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನಸಾಗರ ಎಂದೂ ಹರಿದು ಬಂದಿರಲಿಲ್ಲ. ಅಭಿಮಾನಿಗಳು ಅಕ್ಷರಶಃ “ಪವರ್ ಸ್ಟಾರ್”ಗಳಾದರು. ಅಪ್ಪು ಅಭಿನಯಿಸಿದ ಚಿತ್ರಗಳ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೂ ಅಭಿಮಾನಿಗಳ “ಪವರ್’’ ಮಾತ್ರ ಕಡಿಮೆಯಾಗಲಿಲ್ಲ. ಗಾಯಕರಾದ ಗುರುಕಿರಣ್, ಕುನಲ್ ಗಾಂಜಾವಾಲಾ ಹಾಗೂ ವಿಜಯ್ ಪ್ರಕಾಶ್ ಅವರು ಅಪ್ಪು ಅಭಿನಯದ ಗೀತೆಗಳನ್ನು ಹಾಡಿ ರಂಜಿಸಿದರು.
ಇದಕ್ಕೂ ಮುನ್ನ ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳು ಪುನೀತ್ ಅಭಿನಯದ ಹಾಡುಗಳಿಗೆ ಅದ್ಭುತವಾಗಿ ನೃತ್ಯ ಪ್ರದರ್ಶಿಸಿದರು. “ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು”, “ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ”, “ಆಕಾಶವೇ ಹಾರಾಡುವ ಆನಂದವೇ ತೇಲಾಡುವ ಆಸೆ ಇಂದು ನನಗಾಗಿದೆ”, “ಏನು ಮಾಡೋದು ಒಂಟಿ ಹೂವೊಂದು ರೋಡಲ್ಲಿ ಸಿಕ್ತು”, ”ತಾಲಿಬಾನ್ ಅಲ್ಲ ಅಲ್ಲ ಬಿನ್ ಲ್ಯಾಡೆನ್ ಅಲ್ವೇ ಅಲ್ಲ”, “ಎಲ್ಲಿಂದ ಆರಂಭವೋ”, “ಏಳೂವರೆಗೆ ತುಟಿ ಒಣಗುತ್ತೆ ಏನು ಮಾಡೋಣ”, “ಅಭಿಮಾನಿಗಳೇ ನಮ್ ಮನೆ ದೇವರು..” ಮುಂತಾದ ಹಾಡುಗಳಿಗೆ ನೃತ್ಯ ಮಾಡಿ ರಂಜಿಸಿದರು.
ರಾಘವೇಂದ್ರ ರಾಜ್ಕುಮಾರ್ ಅವರು “ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು”, “ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ” ಗೀತೆಗಳನ್ನು ಹಾಡಿ ರಂಜಿಸಿದರು. ಆಡಿಸಿ ನೋಡು ಗೀತೆ ಅಪ್ಪುಗೋಸ್ಕರ, ಬೊಂಬೈ ಹೇಳುತೈತೆ ಹಾಡು ನಿಮಗೋಸ್ಕರ (ಅಪ್ಪು ಅಭಿಮಾನಿಗಳಿಗಾಗಿ) ಹಾಡಿದೆ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದರು. ನಟ ವಶಿಷ್ಠ ಸಿಂಹ, ಗಾಯಕಿ ಅನುರಾಧ ಭಟ್ ಹಾಡುಗಳನ್ನು ಹಾಡಿ ರಂಜಿಸಿದರು.
ಟೀಸರ್ ನೋಡಿ ಭಾವುಕರಾದ ಅಶ್ವಿನಿ: ಪುನೀತ್ ರಾಜ್ಕುಮಾರ್ ಅಭಿನಯಿಸಿರುವ “ಗಂಧದ ಗುಡಿ” ಚಿತ್ರದ ಟೀಸರ್ಅನ್ನು “ಅಪ್ಪು ನಮನ” ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಈ ಚಿತ್ರ ಅ.28ರಂದು ತೆರೆ ಕಾಣಲಿದೆ. ಟೀಸರ್ ಪ್ರದರ್ಶಿಸುವ ಸಂದರ್ಭ ಅಪ್ಪು ಅಭಿಮಾನಿಗಳು “ಅಪ್ಪು, ಅಪ್ಪು” ಎಂದು ಘೋಷಣೆ ಕೂಗುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಈ ಸಂದರ್ಭ ಅಶ್ವಿನಿ ಪುನೀತ್ ರಾಜ್ಕುಮಾರ್ ಭಾವುಕರಾಗಿ ಕಣ್ಣೀರು ಸುರಿಸಿದರು. ಅಶ್ವಿನಿ ಮಾತ್ರವಲ್ಲ, ಸಾಕಷ್ಟು ಅಭಿಮಾನಿಗಳು ಅಪ್ಪು ಅಭಿನಯದ ಚಿತ್ರದ ಟೀಸರ್ ಪ್ರದರ್ಶಿಸುವ ಸಂದರ್ಭದಲ್ಲಿ ಹಾಗೂ ಅಪ್ಪು ಕುರಿತು ಮಾತನಾಡುವ ವೇಳೆ ಭಾವುಕರಾದರು.
ಅಪ್ಪುಗೆ ಗಣ್ಯರಿಂದ ಗೌರವ ನಮನ: ಅಪ್ಪು ನಮನ ಕಾರ್ಯಕ್ರಮವನ್ನು ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಉದ್ಘಾಟಿಸಿದರು. ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಗೌರವ ನಮನ ಸಲ್ಲಿಸಿದರು. ರಾಘವೇಂದ್ರ ರಾಜ್ಕುಮಾರ್, ವಶಿಷ್ಠ ಸಿಂಹ, ವಿನಯ್ ರಾಜ್ಕುಮಾರ್, ಧೀರೆನ್ ರಾಮ್ಕುಮಾರ್, ಗಂಧದಗುಡಿ ಚಿತ್ರದ ನಿರ್ದೇಶಕ ಅಮೋಘವರ್ಷ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ರೂಪಾ, ಮೈಲ್ಯಾಕ್ ಅಧ್ಯಕ್ಷ ಕೌಟಿಲ್ಯ ರಘು, ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ಗೌಡ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಇದ್ದರು.
ಈ ಹಿಂದೆ ಅಪ್ಪುವನ್ನು ಪ್ರೀತಿಸುತ್ತಿದ್ದ ನೀವು ಇಂದು ಪೂಜಿಸುತ್ತಿದ್ದೀರಾ. ನಾನು ನಿಮ್ಮೆಲ್ಲರಲ್ಲೂ ಅಪ್ಪುವನ್ನು ಕಾಣುತ್ತಿದ್ದೇನೆ. ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಯುವ ಸಂಭ್ರಮ ಕಾರ್ಯಕ್ರಮ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಕೋವಿಡ್ ದೂರವಾಗಿ ಎಲ್ಲರೂ ಒಂದೆಡೆ ಸೇರಿರುವುದು ಸಂತಸದ ಸಂಗತಿ.
|ರಾಘವೇಂದ್ರ ರಾಜ್ಕುಮಾರ್ ನಟ
“ಗಂಧದ ಗುಡಿ” ಚಿತ್ರದ ಮೂಲಕ ಅಪ್ಪುವಿನೊಂದಿಗೆ ಒಂದು ವರ್ಷ ಕಳೆಯುವ ಪುಣ್ಯ ನನಗೆ ದೊರೆಯಿತು. ಆ ಪುಣ್ಯವನ್ನು ಇದೀಗ ನಿಮ್ಮೊಂದಿಗೆ ಹಂಚಿಕೊಳ್ಳುವ ಸಮಯ ಬಂದಿದೆ. ಅ.28 ರಂದು ಚಿತ್ರ ತೆರೆ ಕಾಣಲಿದ್ದು, ಎಲ್ಲರೂ ಚಿತ್ರಮಂದಿರಕ್ಕೆ ಬಂದು ಅಪ್ಪು ಅಭಿನಯದ ಚಿತ್ರವನ್ನು ವೀಕ್ಷಿಸಬೇಕು.
| ಅಮೋಘವರ್ಷ ಗಂಧದಗುಡಿ ಚಿತ್ರ ನಿರ್ದೇಶಕ
ಮೈಸೂರು ದಸರಾದಲ್ಲಿ ಅಪ್ಪು ಚಿತ್ರೋತ್ಸವ: ಅಭಿಮಾನಿಗಳ ಜತೆ ‘ರಾಜಕುಮಾರ’ ಸಿನಿಮಾ ವೀಕ್ಷಿಸಿದ ಅಶ್ವಿನಿ
ಪರಸ್ಪರ ಮದ್ವೆಯಾಗಲು ನಿರ್ಧರಿಸಿದ್ದ ಬೆಂಗಳೂರಿನ ಶಾಲಾ ಬಾಲಕಿಯರು… ಇವರ ಕರುಣಾಜನಕ ಕಥೆ ಕೇಳಿದ್ರೆ ಕರುಳುಹಿಂಡುತ್ತೆ…