More

    ಗಂಡನ ಮೇಲಿನ ಕೋಪಕ್ಕೆ ಅವಳಿ ಮಕ್ಕಳನ್ನು ಕೊಂದ ತಾಯಿ

    ಶ್ರೀರಂಗಪಟ್ಟಣ: ಐಸ್‌ಕ್ರೀಂ ತಿಂದು ಮಲಗಿದ್ದ ಒಂದೂವರೆ ವರ್ಷದ ಅವಳಿ ಮಕ್ಕಳಿಬ್ಬರು ಅನುಮಾನಾಸ್ಪದವಾಗಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದು, ವಾಸ್ತವದಲ್ಲಿ ಪ್ರಕರಣ ಭೇದಿಸಿದ ಬಳಿಕ ತಾಯಿಯೇ ವಿಷಪ್ರಾಶನ ಮಾಡಿ ಮಕ್ಕಳನ್ನು ಕೊಂದಿರುವ ಸತ್ಯಾಂಶ ತಡವಾಗಿ ಬೆಳಕಿಗೆ ಬಂದಿದೆ.

    ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ಪೂಜಾ ಹಾಗೂ ಪ್ರಸನ್ನ ದಂಪತಿ ಮಕ್ಕಳಾದ ಒಂದೂವರೆ ವರ್ಷದ ತ್ರಿಶಾ ಹಾಗೂ ತ್ರಿಶೂಲ್ ಮೃತ ಕಂದಮ್ಮಗಳು.
    ಪೂಜಾ ಹಾಗೂ ಪ್ರಸನ್ನ 5 ವರ್ಷಗಳ ಹಿಂದೆ ವಿವಾಹವಾಗಿದ್ದು, ಇವರಿಗೆ 4 ವರ್ಷದ ಹೆಣ್ಣು ಮಗಳಿದ್ದು, ಒಂದೂವರೆ ವರ್ಷದ ಹಿಂದೆ ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು. ಮೊದಲಿಗೆ ಅವಳಿ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಪೂಜಾ ಗ್ರಾಮದ ತನ್ನ ಮನೆಯ ಮುಂದೆ ಬುಧವಾರ ಮಧ್ಯಾಹ್ನ ವ್ಯಾಪಾರಿಯೊಬ್ಬ ಮಾರಾಟ ಮಾಡುತ್ತಿದ್ದ ಐಸ್‌ಕ್ರೀಂಅನ್ನು ಖರಿದೀಸಿ ತಂದು ಮಕ್ಕಳಿಗೆ ತಿನ್ನಿಸಿ ಜತೆಗೆ ತಾನೂ ತಿಂದು ಬಳಿಕ ಮನೆಯಲ್ಲೇ ಮಕ್ಕಳನ್ನು ಕೆಲಕಾಲ ಮಲಗಿಸಿದ್ದೆ. ಸಂಜೆ ವೇಳೆಗೆ ಎಬ್ಬಿಸಲು ಹೋದಾಗ ತೀವ್ರ ಅಸ್ವಸ್ಥಗೊಂಡಂತೆ ಕಂಡುಬಂದು ಆತಂಕದಿಂದ ಸಮೀಪದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಇಬ್ಬರೂ ಮೃತಪಟ್ಟಿದ್ದರು ಎಂದು ಬಿಂಬಿಸಿ ತಾನೂ ಸಹ ಅಸ್ವಸ್ಥಗೊಂಡಂತೆ ನಟಿಸಿದ್ದಳು.

    ಇದರಿಂದ ಐಸ್‌ಕ್ರೀಂ ತಿಂದ ಗ್ರಾಮದ ಇತರ ಮಕ್ಕಳ ಪಾಲಕರು ಆತಂಕಕ್ಕೀಡಾಗಿ, ವ್ಯಾಪಾರಿಯನ್ನು ಹುಡುಕಿ ಹೊಡೆಯಲು ಯತ್ನಿಸಿದ್ದರು. ಅರಕೆರೆ ಠಾಣೆ ಪೊಲೀಸರು ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಬುಧವಾರ ರಾತ್ರಿಯೇ ಮಂಡ್ಯದ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದರು. ಬಳಿಕ ಪ್ರಕರಣದ ಕುರಿತು ಅನುಮಾನಗೊಂಡು ತನಿಖೆ ಕೈಗೊಂಡ ಪೊಲೀಸರು ಗ್ರಾಮದಲ್ಲಿ ಐಸ್‌ಕ್ರೀಂ ತಿಂದಿದ್ದ ಇತರ ಮಕ್ಕಳು ಹಾಗೂ ಜನರ ಆರೋಗ್ಯದಲ್ಲಿ ಏರುಪೇರು ಆಗದ್ದನ್ನು ಗಮನಿಸಿ ಮಹಿಳೆ ವಿಚಾರಣೆ ನಡೆಸಿದ್ದಾರೆ.

    ಈ ವೇಳೆ ತಾಯಿ ಪೂಜಾ ತಾನೇ ಅವಳಿ ಮಕ್ಕಳಿಗೆ ಲಕ್ಷ್ಮಣ ರೇಖೆ ತಿನ್ನಿಸಿ ಕೊಂದಿರುವುದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದು, ತನ್ನ ಗಂಡ ಪ್ರಸನ್ನನೊಂದಿಗೆ ಜಗಳವಾಡಿಕೊಂಡು ಉಂಟಾದ ವಿರಸದಿಂದ ನೊಂದು ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾಳೆ.

    ಅರಕೆರೆ ಠಾಣೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts