ಹುಬ್ಬಳ್ಳಿ: ಕೆರೆಗೆ ಜಿಗಿದು ತಮ್ಮ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿದ ಅಣ್ಣನಿಗೆ ಹೃದಯಾಘಾತ ಸಂಭವಿಸಿದ್ದು, ಸಹೋದರರಿಬ್ಬರು ದುರಂತ ಅಂತ್ಯ ಕಂಡ ಘಟನೆ ನಗರದಲ್ಲಿ ಸಂಭವಿಸಿದೆ.
ಅಶೋಕನಗರ ನಿವಾಸಿ ಸುನೀಲ ದೋಂಗಡಿ(33) ಮತ್ತು ಈತನ ಅಣ್ಣ ರಾಜು ದೋಂಗಡಿ(35) ಮೃತರು. ಸೋಮವಾರ ತಡರಾತ್ರಿ ನಗರದ ಉಣಕಲ್ ಕೆರೆಗೆ ಜಿಗಿದು ಸುನೀಲ ಆತ್ಮಹತ್ಯೆ ಮಾಡಿಕೊಂಡಿದ್ದ. ಈತನ ಸಾವಿನ ಸುದ್ದಿ ಕೇಳುತ್ತಿದ್ದಂತೆ ತೀವ್ರ ಆಘಾತಗೊಂಡ ಸಹೋದರ ರಾಜುಗೆ ಹೃದಯಾಘಾತವಾಗಿದ್ದು, ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ವಿದ್ಯಾನಗರ ಠಾಣೆ ಇನ್ಸ್ಪೆಕ್ಟರ್ ವಿಶ್ವನಾಥ ಚೌಗಲೆ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ವ್ಯಾಪಾರದಲ್ಲಿ ನಷ್ಟ ಹೊಂದಿದ್ದರಿಂದ ಸುನೀಲ ಮನನೊಂದಿದ್ದ. ಜತೆಗೆ ಸಾಲವನ್ನೂ ಮಾಡಿಕೊಂಡಿದ್ದ. ಇದರಿಂದ ಬೇಸತ್ತು ಉಣಕಲ್ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಸಹೋದರ ರಾಜು ದೋಂಗಡಿ, ತನ್ನ ಸಹೋದರನ ಸಾವಿನ ವಿಷಯ ಕೇಳಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣ ದಾಖಲಾದ ಬಳಿಕ ಪೊಲೀಸರ ತನಿಖೆ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.
10 ವರ್ಷದ ಬಳಿಕ ಬಯಲಾಯ್ತು ಮರ್ಯಾದಾ ಹತ್ಯೆ ಪ್ರಕರಣ: ಬಾರ್ನಲ್ಲಿ ಕುಳಿತು ಕುಡಿದ ನಶೆಯಲ್ಲಿ ಸತ್ಯ ಕಕ್ಕಿದ ಗಂಡ!
ಬೈಕ್ ಸ್ಕಿಡ್ ಆಗಿ ವಿದ್ಯಾರ್ಥಿಗಳಿಬ್ಬರ ಸಾವು: ರಜೆ ಹಿನ್ನೆಲೆ ಮುರುಡೇಶ್ವರಕ್ಕೆ ತೆರಳುವಾಗ ಅವಘಡ