ಉಡುಪಿ: ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಶಾಸಕ ರಘುಪತಿ ಭಟ್ ಅವರಿಗೆ ವಿದೇಶಗಳಿಂದ ಬೆದರಿಕೆ ಕರೆ ಬರುತ್ತಿವೆ.
ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ರಘುಪತಿ ಭಟ್ ಅವರೇ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಗೃಹಸಚಿವರಿಗೆ ಮೌಖಿಕವಾಗಿ ದೂರು ನೀಡಲಾಗಿದೆ. ಹೈದರಾಬಾದ್ ಮತ್ತು ವಿದೇಶಗಳಿಂದ ಇಂಟರ್ನೆಟ್ ಕರೆಗಳು ಬರುತ್ತಿದ್ದು, ‘ನಿನ್ನನ್ನು ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಗನ್ ಮ್ಯಾನ್ ಭದ್ರತೆ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಸದ್ಯಕ್ಕೆ ಇದನ್ನು ನಿರಾಕರಿಸಿದ್ದೇನೆ ಎಂದರು.
ಮೇಲಿಂದ ಮೇಲೆ ಬೆದರಿಕೆ ಕರೆಗಳು ಬರುತ್ತಿವೆ. ಇದಕ್ಕೆಲ್ಲ ಹೆದರುವ ಪ್ರಶ್ನೆಯೇ ಇಲ್ಲ. ನಾನು ಜನರ ಮಧ್ಯದಲ್ಲಿ ಇರುವವನು. ಹಾಗಾಗಿ ವಿಶೇಷ ಭದ್ರತೆ ಬೇಕಾಗಿಲ್ಲ. ಈ ಆರು ಮಂದಿ ಹಿಜಾಬ್ ಹೋರಾಟಗಾರ್ತಿಯರು ಭಾಷೆ ಹೆಸರಲ್ಲಿ ಗಲಾಟೆ ಮಾಡಲು ಪ್ರಯತ್ನಿಸಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ. ಆ ಬಳಿಕ ಹಿಜಾಬ್ ವಿಚಾರ ಎತ್ತಿದ್ದಾರೆ. ಉಡುಪಿಯ ಮುಸ್ಲಿಂ ಬಾಂಧವರು ನಮಗೆ ಉತ್ತಮ ರೀತಿಯಲ್ಲಿ ಸಹಕರಿಸಿದ್ದಾರೆ ಎಂದು ರಘುಪತಿ ಭಟ್ ಹೇಳಿದರು.
ಮಧ್ಯಂತರ ಆದೇಶ ಪ್ರಕಟಿಸಿದ ಹೈಕೋರ್ಟ್ ಪೂರ್ಣಪೀಠ: ತರಗತಿಯೊಳಗೆ ಹಿಜಾಬ್, ಕೇಸರಿ ಶಾಲಿಗೆ ನಿರ್ಬಂಧ