ಬೆಂಗಳೂರು: ಹಿಜಾಬ್ ವಿವಾದ ರಾಜ್ಯ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ಚಂದ್ರಾಲೇಔಟ್ನ ವಿದ್ಯಾಸಾಗರ್ ಶಾಲೆಯಲ್ಲಿ ಹಿಜಾಬ್ ಧರಿಸದಂತೆ ಶಿಕ್ಷಕಿಯೊಬ್ಬರು ಸೂಚಿಸಿದ್ದಾರೆ ಎಂದು ಆರೋಪಿಸಿ ಪಾಲಕರು ಶನಿವಾರ ಪ್ರತಿಭಟನೆ ನಡೆಸಿದ್ದು, ಶಿಕ್ಷಕಿಯನ್ನು ವಜಾಗೊಳಿಸಲಾಗಿದೆ. ಶಿಕ್ಷಕಿಯನ್ನು ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಶಾಲೆ ಮುಂದೆ ಪ್ರತಿಭಟನೆ ನಡೆಸಿವೆ.
ಚಂದ್ರಾಲೇಔಟ್ನಲ್ಲಿರುವ ವಿದ್ಯಾಸಾಗರ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿಗೆ ಬರದಂತೆ ಶಿಕ್ಷಕರು ಹೇಳಿದ್ದರು. ಶುಕ್ರವಾರ ಶಾಲೆಯ ಶಿಕ್ಷಕಿ ಶಶಿಕಲಾ ತರಗತಿಯ ಬೋರ್ಡ್ ಮೇಲೆ ಕೆಎಲ್ಎಸ್ ಎಂದು ಬರೆದಿರುವುದನ್ನು ವಿದ್ಯಾರ್ಥಿಗಳು ಪಾಲಕರಿಗೆ ತಿಳಿಸಿದ್ದರು. ಶನಿವಾರ ಬೆಳಗ್ಗೆ ಶಾಲೆ ಮುಂದೆ ಜಮಾಯಿಸಿದ ಪಾಲಕರು ಈ ವಿಚಾರವಾಗಿ ಶಿಕ್ಷಕರೊಂದಿಗೆ ವಾಗ್ವಾದ ನಡೆಸಿದರು. ಬೋರ್ಡ್ ಮೇಲೆ ಹಿಜಾಬ್ಗೆ ಅವಮಾನಿಸಿ ಬರೆಯಲಾಗಿದೆ. ಆ ಶಿಕ್ಷಕಿಯನ್ನು ಕರೆಸಿ ಎಂದು ಪಟ್ಟು ಹಿಡಿದಿದರು. ಸ್ಥಳಕ್ಕೆ ಬಂದ ಚಂದ್ರಾಲೇಔಟ್ ಠಾಣೆ ಪೋಲೀಸರು ಪರಿಸ್ಥಿತಿ ತಿಳಿಗೊಳಿಸಿ, ಪಾಲಕರ ಮನವೊಲಿಸಿ ಕಳುಹಿಸಿದರು. ಇದರ ಬೆನ್ನಲ್ಲೇ ಶಾಲೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಶಿಕ್ಷಕಿಯನ್ನು ವಿದ್ಯಾಸಾಗರ್ ಶಾಲಾ ಆಡಳಿತ ಮಂಡಳಿಯು ಕೆಲಸದಿಂದ ತೆಗೆದು ಹಾಕಿದೆ. ಶಿಕ್ಷಕಿ ಶಶಿಕಲಾ ಹಿಜಾಬ್ ಬಗ್ಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬಳು ಚಂದ್ರಲೇಔಟ್ ಪೊಲೀಸರಿಗೆ ದೂರು ನೀಡಿದ್ದಾಳೆ.
ಶಿಕ್ಷಕಿಯನ್ನು ಅಮಾನತುಗೊಳಿಸಿರುವ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಶಾಲೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಶಶಿಕಲಾರನ್ನು ಕೆಲಸದಿಂದ ವಜಾಗೊಳಿಸಿರುವುದು ಸರಿಯಲ್ಲ ಎಂದು ರಾಷ್ಟ್ರ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು.
ಶಿಕ್ಷಿಕಿ ಪಾಠ ಮಾಡುವಾಗ ಮಕ್ಕಳು ಗಲಾಟೆ ಮಾಡುತ್ತಿದ್ದರು. ಆ ವೇಳೆ ಬೋರ್ಡ್ನಲ್ಲಿ ಶಿಕ್ಷಕಿ ಕೆಎಲ್ಎಸ್ ಎಂದು ಬರೆದಿದ್ದಾರೆ. ಇದರ ಅರ್ಥ ಹೇಳಿ ಎಂದು ಶಿಕ್ಷಕಿ ಮಕ್ಕಳನ್ನು ಪ್ರಶ್ನಿಸಿದ್ದಾರೆ. ಆಗ ವಿದ್ಯಾರ್ಥಿಗಳು ಬೈಗುಳದ ನಾನಾ ಅರ್ಥ ಹೇಳಿದ್ದಾರೆ. ಗಲಾಟೆ ಮಾಡುತ್ತಿದ್ದವರ ಹೆಸರು ಬರೆದಿರುವುದಾಗಿ ಶಿಕ್ಷಕಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ವಿದ್ಯಾರ್ಥಿನಿಯರು ಇದನ್ನು ತಪ್ಪಾಗಿ ಅರ್ಥೈಹಿಸಿ ಪಾಲಕರಿಗೆ ಹೇಳಿದ್ದರು ಎನ್ನಲಾಗಿದೆ.
ಹಿಜಾಬ್ ವಿವಾದ: ಸ್ಫೋಟಕ ರಹಸ್ಯ ಬಯಲು, ಎರಡು ತಿಂಗಳ ಹಿಂದೆಯೇ ನಡೆದಿತ್ತು ಮಾಸ್ಟರ್ ಪ್ಲ್ಯಾನ್…
ಪ್ರೇಮ ವಿವಾಹವಾದ್ರೂ ಮತ್ತೊಬ್ಬನ ಮೇಲೆ ಮೋಹ: ಪುರುಷನ ಚಪ್ಪಲಿ, ಪ್ರಸಾದದ ಬ್ಯಾಗು ಬಿಚ್ಚಿಟ್ಟ ಭಯಾನಕ ರಹಸ್ಯವಿದು