ಬೆಂಗಳೂರು: ಸಾಗರ ತಾಲೂಕು ಉಪ ವಿಭಾಗಾಧಿಕಾರಿ ಡಾ.ನಾಗರಾಜ್ಗೆ ಹೈಕೋರ್ಟ್ 10 ಸಾವಿರ ರೂಪಾಯಿ ದಂಡ ವಿಧಿಸಿ, ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸಲು ಸೂಚನೆ ನೀಡಿದೆ.
ಆಸ್ತಿಯೊಂದರ ವ್ಯಾಜ್ಯ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ಕಂದಾಯ ದಾಖಲೆಯ ಬದಲಾವಣೆಗೆ ಆದೇಶಿಸಿದ ಪ್ರಕರಣ ಸಂಬಂಧ ಎಸಿಗೆ ಹೈಕೋರ್ಟ್ ದಂಡ ವಿಧಿಸಿದೆ. ಶಿಕಾರಿಪುರ ತಾಲೂಕಿನ ಮುದ್ದೇನಹಳ್ಳಿಯ ಕೆಂಗಟ್ಟೆ ಗ್ರಾಮದ ಪಿ.ಆರ್.ರಂಗಪ್ಪ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಹಾಗೂ ನ್ಯಾಯಮೂರ್ತಿ ಸಿ.ಎಂ.ಜೋಷಿ ಅವರಿದ್ದ ಪೀಠ, ಈ ಆದೇಶ ಮಾಡಿದೆ.
ಅರ್ಜಿಯ ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ಗುರುವಾರ ಖುದ್ದು ವಿಚಾರಣೆಗೆ ಹಾಜರಿದ್ದ ಉಪ ವಿಭಾಗಾಧಿಕಾರಿ ನಾಗರಾಜ್, ತಮ್ಮ ತಪ್ಪಿಗೆ ಬೇಷರತ್ ಕ್ಷಮೆ ಯಾಚಿಸಿದರು. ಆದರೆ, ವ್ಯಾಜ್ಯ ಕೋರ್ಟ್ ವಿಚಾರಣೆಯಲ್ಲಿ ಇರುವಾಗ ಕಂದಾಯ ದಾಖಲೆ ಬದಲಾವಣೆ ಮಾಡಲು ಆದೇಶ ಹೊರಡಿಸಿರುವುದು ಕಾನೂನು ಬಾಹಿರ ಕ್ರಮ ಎಂದು ಅಭಿಪ್ರಾಯಪಟ್ಟ ಪೀಠ, ಉಪವಿಭಾಗಾಧಿಕಾರಿಗೆ 10 ಸಾವಿರ ರೂ. ದಂಡ ವಿಧಿಸಿ, ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸುವಂತೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಪ್ರಕರಣವೇನು?: ಸರ್ಕಾರ 1964ರಲ್ಲಿ ಕೆಂಗಟ್ಟೆ ಗ್ರಾಮದಲ್ಲಿ ನನಗೆ 2 ಎಕರೆ ಜಮೀನು ಮಂಜೂರು ಮಾಡಿತ್ತು. ಆದರೆ, ಜಮೀನು ಕಬಳಿಕೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಭೂ ಕಬಳಿಕೆ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿದೆ. ಈ ಸಂಬಂಧ ನ್ಯಾಯಾಲಯ ನನಗೆ ನೋಟಿಸ್ ಜಾರಿಗೊಳಿಸಿತ್ತು. ಜತೆಗೆ, ಪ್ರಕರಣದ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಉಪ ವಿಭಾಗಾಧಿಕಾರಿಗೆ ಸೂಚಿಸಿತ್ತು. ವರದಿ ನೀಡುವ ಸಮಯದಲ್ಲಿ ಉಪವಿಭಾಗಾಧಿಕಾರಿ ಸ್ವಇಚ್ಛೆಯಿಂದ ಖಾತೆ ಬದಲಾವಣೆಗೆ ಆದೇಶಿಸಿದ್ದಾರೆ. ಹಾಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ರಂಗಪ್ಪ ಮನವಿ ಮಾಡಿದ್ದರು.
ಯುವತಿ ಜತೆ ಮೈಸೂರಿನ ಲಾಡ್ಜ್ನಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!
ಅಬ್ಬಬ್ಬಾ, ಕೋಡಿ ಬಿದ್ದ ಕೆರೆಯಲ್ಲಿ ಮೀನುಗಳ ನರ್ತನ..? ಸಖತ್ ವೈರಲ್ ಆಗ್ತಿದೆ ಈ ವಿಡಿಯೋ