ಬೆಂಗಳೂರು: ದೇಶದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ. ಇನ್ನೂ ಮೂರು ತಿಂಗಳು ಕಾದು ನೋಡಿ ಎಂದು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಮಾರ್ಮಿಕವಾಗಿ ನುಡಿದರು. ಇದಕ್ಕೆ ಧ್ವನಿಗೂಡಿಸಿದ ಕರ್ನಾಟಕ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ರಾಷ್ಟ್ರದ ಉಳಿವಿಗಾಗಿ ಸಮಾನ ಮನಸ್ಕರ ಮುಂದಿನ ನಡೆ, ಇನ್ನು 2-3 ತಿಂಗಳಲ್ಲಿ ಅಚ್ಚರಿ ಬೆಳವಣಿಗೆ ನೋಡುವಿರಿ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಗುರುವಾರ ಆಗಮಿಸಿದ ತೆಲಂಗಾಣ ಸಿಎಂ ಕೆಸಿಆರ್, ದೇವೇಗೌಡ ಹಾಗೂ ಕುಮಾರಸ್ವಾಮಿ ಜತೆ ಮಧ್ಯಾಹ್ನದ ಭೋಜನದ ಬಳಿಕ ಸತತ ಮೂರು ತಾಸು ಚರ್ಚಿಸಿದರು. ದೇಶದ ಪ್ರಸ್ತುತ ರಾಜಕೀಯ ವಿದ್ಯಮಾನ, ತೃತೀಯ ರಂಗಕ್ಕೆ ಚಾಲನೆ ನೀಡುವ ಅಗತ್ಯತೆ ಕುರಿತು ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಮಾತುಕತೆ ಫಲಿತಾಂಶ ಮುಂದೆ ತಿಳಿಯಲಿದೆ. ದೇಶದ ಭವಿಷ್ಯ ಉಜ್ವಲಗೊಳಿಸುವ ನಿಟ್ಟಿನಲ್ಲಿ ಮೂರು ತಾಸು ಮಾತುಕತೆಯಾಗಿದೆ ಎಂದರು.
ವಿಯದಶಮಿಗೆ ಪೂರಕವಾಗಿ ಮಹತ್ವದ, ಸಕಾರಾತ್ಮಕ ತೀರ್ಮಾನಗಳಾಗಲಿವೆ. ತೃತೀಯ ಶಕ್ತಿ ಹುಟ್ಟು ಹಾಕುವ ವಿಚಾರದಲ್ಲಿ ಹಿಂದಿನ ಸಂದರ್ಭ, ಈಗಿನ ಪರಿಸ್ಥಿತಿ ಬೇರೆ. ಅಭಿವೃದ್ಧಿಗೆ ಪೂರಕ, ವಿಷಯಾಧಾರಿತದಲ್ಲಿ ಪರ್ಯಾಯ ವ್ಯವಸ್ಥೆ ಅಗತ್ಯವಿದೆ. ತೃತೀಯ ರಂಗದ ಪ್ರಶ್ನೆಯಲ್ಲ, ಬಿಜೆಪಿಗೆ ಪರ್ಯಾಯ ಶಕ್ತಿ, ಮುಂದಿನ ಹೋರಾಟಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಚಂದ್ರಶೇಖರ ರಾವ್ ಪ್ರಯತ್ನ. ಇದೇ ವಿಷಯಗಳ ಕುರಿತು ದೇವೇಗೌಡರ ಜತೆಗೆ ಮಾತುಕತೆ ನಡೆಸಿದರು ಎಂದು ಕುಮಾರಸ್ವಾಮಿ ವಿವರಿಸಿದರು.
ಕೆಸಿಆರ್ ಮಾತನಾಡಿ, ಕೇಂದ್ರದಲ್ಲಿ ಸರ್ಕಾರ ರಚನೆಯಾಗುತ್ತೋ ಇಲ್ಲವೋ ಅದು ನಂತರದ ಪ್ರಶ್ನೆ. ಬಹುದೊಡ್ಡ ಮಾನವ, ನೈಸರ್ಗಿಕ ಸಂಪನ್ಮೂಲಗಳಿವೆ. ಐದು ಟ್ರಿಲಿಯನ್ ಆರ್ಥಿಕತೆ ಮಾತು ಅಪಮಾನಕರ. ಬಲಿಷ್ಠ ಹಿಂದುಸ್ತಾನ್ ಅಗತ್ಯವಿದೆ. ಚೀನಾ, ಅಮೆರಿಕಕ್ಕಿಂತ ಶ್ರೀಮಂತವಾಗುವ ತಾಕತ್ತಿದೆ. ದೊಡ್ಡ ಭಾಷಣಗಳನ್ನು ಕೇಳುತ್ತಿದ್ದೇವೆ. ಇದರಿಂದ ಏನೂ ಪ್ರಯೋಜನವಿಲ್ಲ. ರಾಷ್ಟ್ರ, ಕರ್ನಾಟಕ ರಾಜಕಾರಣದ ಬಗ್ಗೆ ದೇವೇಗೌಡರ ಜತೆ ಮಾತುಕತೆ ನಡೆಸಿದ್ದೇನೆ ಎಂದರು.
ಬೆಂಗಳೂರಲ್ಲಿ ಸ್ಕೂಲ್ ಬಸ್ ಅಪಘಾತ: ಕಾಲೇಜಿಗೆ ಸೇರಲು ಹೊರಟ್ಟಿದ್ದ ಬಾಲಕಿ ಸ್ಥಳದಲ್ಲೇ ಸಾವು
ಹೈದರಾಬಾದ್ನಲ್ಲಿ ಮೋದಿ, ಬೆಂಗ್ಳೂರಲ್ಲಿ ಕೆಸಿಆರ್! ಪ್ರಧಾನಿಗೆ ಸ್ವಾಗತ ಕೋರಲು ಮನಸು ಮಾಡಲಿಲ್ಲ ಏಕೆ ತೆಲಂಗಾಣ ಸಿಎಂ?