ಬೆಂಗಳೂರು: ಸುಂದರವಾಗಿ ಕಾಣಿಸಲು ದೇಹದಲ್ಲಿನ ಫ್ಯಾಟ್ ಬರ್ನ್ ಮಾಡಿಸಿಕೊಳ್ಳಬೇಕು ಎಂದು ಆಸ್ಪತ್ರೆಗೆ ಹೋದ ಕನ್ನಡದ ಕಿರುತೆರೆಯ ಯುವ ನಟಿ ಚೇತನಾ ರಾಜ್ ಆಪರೇಷನ್ ವೇಳೆಯೇ ದುರಂತ ಅಂತ್ಯಕಂಡಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರ ಆಗುತ್ತಿರುವ ‘ಗೀತಾ’, ‘ದೊರೆಸಾನಿ’, ‘ಒಲವಿನ ನಿಲ್ದಾಣ’ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಚೇತನಾಗೆ ಸೌಂದರ್ಯದ ಮೇಲಿದ್ದ ಮೋಹವೇ ಜೀವ ತೆಗೆದಿದೆ. ಮನೆಯವರಿಗೂ ತಿಳಿಸದೆ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಸೋಮವಾರ ಬೆಳಗ್ಗೆ ನವರಂಗ್ನ ಡಾ.ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಗೆ ದಾಖಲಾಗಿದ್ದರು. ಫ್ಯಾಟ್ ಬರ್ನಿಂಗ್ ಆಪರೇಷನ್ಗೆ 1.60 ಲಕ್ಷ ರೂ. ಶುಲ್ಕ ಪಾವತಿಸುವಂತೆ ಆಸ್ಪತ್ರೆಯವರು ಹೇಳಿದ್ದರಂತೆ. ಆಪರೇಷನ್ಗೂ ಮೊದಲು ನಟಿ ಚೇತನಾ ರಾಜ್ 92 ಸಾವಿರ ಹಣ ಕಟ್ಟಿದ್ದರಂತೆ. ಅಂದು ಆಪರೇಷನ್ ಮಾಡುವಾಗ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು, ಐಸಿಯು ಸೌಲಭ್ಯ ಇರಲಿಲ್ಲ. ಕೂಡಲೇ ಕಾಡೆ ಹಾಸ್ಪಿಟಲ್ಗೆ ನಟಿಯನ್ನು ಸ್ಥಳಾಂತರಿಸಲಾಗಿತ್ತು. ಡಾ.ಸಾಹೇಬ್ ಗೌಡ ಆ್ಯಂಡ್ ಟೀಂ ನಟಿಗೆ ಆಪರೇಷನ್ ಮಾಡಿದ್ದು, ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದು ಮಾತ್ರವಲ್ಲ, ಕಾರ್ಡಿಯಾಕ್ ಅರೆಸ್ಟ್ ಕೂಡ ಆಗಿದೆ. ಮಾರ್ಗಮಧ್ಯೆಯೇ ನಟಿಯ ಪಲ್ಸ್ ರೇಟ್ ಕಡಿಮೆಯಾಗಿ ಮೃತಪಟ್ಟಿದ್ದಾರೆ. ನಟಿ ಸತ್ತರೂ ಕಾಡೇ ಆಸ್ಪತ್ರೆ ಸಿಬ್ಬಂದಿ, 19 ಸಾವಿರ ಬಿಲ್ ಕಟ್ಟುವಂತೆ ಕೇಳಿದ್ದಾರೆ!
ಆಸ್ಪತ್ರೆಗೆ ಬರುವಾಗಲೇ ಚೇತನಾ ಸಾವನ್ನಪ್ಪಿದ್ದಾಳೆ ಎಂದು ನೀವೇ ಹೇಳಿದ್ದೀರಿ. ಈಗ 19 ಸಾವಿರ ಬಿಲ್ ಮಾಡಿದ್ದೀರಾ ಏಕೆ? ಎಂದು ಪೋಷಕರು ಗಲಾಟೆ ಮಾಡಿದಾಗ, 9 ಸಾವಿರ ಹಣ ಕಟ್ಟಿಸಿಕೊಂಡು ಮೃತದೇಹ ಕೊಟ್ಟಿದ್ದಾರೆ. ಚೇತನಾ ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯಲಿದೆ.
ಸೋಮವಾರ ಬೆಳಗ್ಗೆ ಸುಮಾರು ಎಂಟೂವರೆಯಲ್ಲಿ ಮಗಳು ಚೇತನಾ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾಳೆ. ನಮಗೆ ವಿಚಾರ ಗೊತ್ತಾಗಿ, ನಾವು ಬರೋ ಹೊತ್ತಿಗೆ ಸರ್ಜರಿ ನಡೀತಿತ್ತು. ಸಂಜೆ ಹೊತ್ತಿಗೆ ಶ್ವಾಸಕೋಶಕ್ಕೆ ಕೊಬ್ಬಿನ ಅಂಶ ತುಂಬಿ ಉಸಿರಾಟದ ತೊಂದರೆ ಆಗಿದೆ. ಆ ಆಸ್ಪತ್ರೆಯಲ್ಲಿ ಐಸಿಯು ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲ. ಈ ಹಿಂದೆ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳುವುದಾಗಿ ಚೇತನಾ ಹೇಳಿದ್ದಳು. ನಾವು ಬೇಡ ಎಂದು ಹೇಳಿದ್ವಿ. ಹಾಗಾಗಿ ನಮ್ಮ ಗಮನಕ್ಕೆ ತಾರದೆ ಸರ್ಜರಿಗೆ ಬಂದಿದ್ದಳು. ವೈದ್ಯರ ನಿರ್ಲಕ್ಷ್ಯಕ್ಕೆ ನನ್ನ ಮಗಳು ಬಲಿಯಾಗಿದ್ದಾಳೆ ಎಂದು ಮೃತಳ ತಂದೆ ವರದರಾಜ್ ಕಣ್ಣೀರು ಸುರಿಸಿದರು.
PSI ಹುದ್ದೆ ಅಕ್ರಮ: ಪೊಲೀಸಪ್ಪನ ಮನೆಯಲ್ಲಿತ್ತು ಒಂದೂವರೆ ಕೋಟಿ ರೂ. ನಗದು!
ಹನಿಟ್ರ್ಯಾಪ್ಗೆ ಬೆಂಗಳೂರಲ್ಲಿ ಬಿಜೆಪಿ ಮುಖಂಡ ಬಲಿ! ಪತ್ನಿಗೆ ಸಿಕ್ಕ ಡೆತ್ನೋಟ್ನಲ್ಲಿದೆ ಸ್ಫೋಟಕ ರಹಸ್ಯ