ಮುಳಗುಂದ: ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಜೆ ಬಳಿಕ ಎರಡು ಗಂಟೆಗಳ ಕಾಲ ಸುರಿದ ರಭಸದ ಮಳೆ ತೀವ್ರ ತೊಂದರೆಯುಂಟು ಮಾಡಿತು.
ಜಮೀನಿನಲ್ಲಿ ಬೆಳೆದ ಬೆಳೆ ಜಲಾವೃತವಾದವು. ಕೆಲ ರೈತರ ಜಮೀನುಗಳ ಬದುವುಗಳು ಕೊಚ್ಚಿಕೊಂಡು ಹೋದವು. ಹೆಸರು ಬೆಳೆಯಂತೂ ನೆಲಕಚ್ಚಿ ಹೋಗುವಂತಾಯಿತು. ಇದರಿಂದ ರೈತರು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು ಎಂದು ಮಮ್ಮಲ ಮರುಗುಂತೆ ಮಾಡಿತು.
ಹಳ್ಳ, ಕೊಳ್ಳಗಳು ತುಂಬಿ ಹರಿದವು. ಪಟ್ಟಣದ ಪ್ರಮುಖ ಕೆರೆ ಅಬ್ಬಿಕೆರೆಯ ಕೋಡಿ ಬಿದ್ದು ನೀರು ಹೊರ ಹೋಯಿತು.