ತೀರ್ಥಹಳ್ಳಿ: ಶಾಸಕರ ಅನುದಾನದಲ್ಲಿ ಮೂರು ತಿಂಗಳ ಹಿಂದಷ್ಟೇ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಹಾದಿಗಲ್ಲು ಹರಿಜನಕೇರಿಯ ಕಾಂಕ್ರೀಟ್ ರಸ್ತೆ ಮಳೆ ನೀರಿನಲ್ಲಿ ಕೊಚ್ಚಿಹೋಗಿದೆ. ಅತ್ಯಂತ ಕಳಪೆ ಕಾಮಗಾರಿಯಿಂದಾಗಿ ಈ ರಸ್ತೆಗೆ ಹೊಂದಿಕೊಂಡು ನಿರ್ಮಿಸಿದ್ದ ಮೋರಿ ಕಟ್ಟೆ ಕೂಡ ಕುಸಿದು ಬಿದ್ದಿದೆ. ಈ ಕಾಮಗಾರಿ ಆರಂಭದಲ್ಲೇ ಕಳಪೆಯಾಗುತ್ತಿರುವ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ತಂದರೂ ಗಮನ ಹರಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಮತ್ತು ಕಾಮಗಾರಿ ಕಳಪೆಯಾಗುವುದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.