ವಿಜಯಪುರ: ನಗರದ ಪ್ರತಿಷ್ಠಿತ ಬಿಎಲ್ಡಿಇ ಸಂಸ್ಥೆಯ ಸಿಬಿಎಸ್ಇ ಶ್ರೀ ಬಿ.ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಅತ್ಯಂತ ವರ್ಣರಂಜಿತವಾಗಿ ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಲಾಯಿತು.
ಕರ್ನಾಟಕ ರಾಜ್ಯ ಸೈಕ್ಲಿಂಗ್ ಅಮೇಚೂರ್ ಸಂಘದ ಅಧ್ಯಕ್ಷ ರಾಜು ಬಿರಾದಾರ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಮಕ್ಕಳಿಗೆ ಪಾಠಗಳ ಜೊತೆಗೆ ಆಟವೂ ಮುಖ್ಯ, ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂದು ಕ್ರೀಡೆಗಳ ಮಹತ್ವ ಕುರಿತು ವಿವರಿಸಿದರು.
ಕ್ರೀಡಾ ನಿರ್ದೇಶಕ ಪ್ರೊ.ಎಸ್.ಎಸ್. ಕೋರಿ ಮಕ್ಕಳ ಕವಾಯತ್ ನಮನ ಸ್ವೀಕರಿಸಿದರು. ಶಾಲಾ ಆಡಳಿತಾಧಿಕರಿ ಕೌಶಿಕ್ ಬ್ಯಾನರ್ಜಿ ಕ್ರೀಡಾಜ್ಯೋತಿಗೆ ಚಾಲನೆ ನೀಡಿದರು.
ಕ್ರೀಡಾಜ್ಯೋತಿ ಹಿಡಿದು ಓಡುವ ಕ್ರೀಡಾಪಟುಗಳ ಓಟ ಎಲ್ಲರ ಗಮನ ಸೆಳೆಯಿತು. ಜುಂಬಾನೃತ್ಯ, ಕಂಸಾಳೆ ಕುಣಿತ, ಯೋಗ, ಕರಾಟೆ ಪ್ರದರ್ಶನ, ಪ್ರೇಕ್ಷಕರನ್ನು ರೋಮಾಂಚಿತಗೊಳಿಸಿದವು. ಪ್ರಾಚಾರ್ಯ ಬಂಧನಾ ಬ್ಯಾನರ್ಜಿ, ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ, ಜಲನಗರ ಉಪಶಾಖೆಯ ಪ್ರಾಚಾರ್ಯ ದರ್ಶನ ಹುನಗುಂದ ಉಪಸ್ಥಿತರಿದ್ದರು. ನೀತಾ ಮಠ ನಿರೂಪಿಸಿದರು. ಸಾಯಿರಾ ಶೇಖ್ ವಂದಿಸಿದರು.