ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಕೋಪಗೊಂಡ ಮುಸ್ಲಿಂ ಮಹಿಳೆಯೊಬ್ಬರು ಸಿದ್ದರಾಮಯ್ಯ ಕೊಟ್ಟ ಪರಿಹಾರದ ಹಣವನ್ನು ಎಸೆದಿದ್ದಾರೆ. ಈ ದೃಶ್ಯ ವೈರಲ್ ಆಗಿದೆ.
ಕೆರೂರ ಗುಂಪು ಘರ್ಷಣೆಯಲ್ಲಿ ಗಾಯಗೊಂಡವರಿಗೆ ಸಿದ್ದರಾಮಯ್ಯ 2 ಲಕ್ಷ ರೂ. ಪರಿಹಾರ ಹಣ ನೀಡಿದ್ದರು. ಈ ಹಣವನ್ನ ಮಹಿಳೆ ಎಸೆದಿದ್ದಾರೆ. ಹಿಂದು-ಮುಸ್ಲಿಂ ಇಬ್ಬರೂ ನೆಮ್ಮದಿಯಿಂದ ಬದುಕವ ವಾತಾವರಣ ಬೇಕು. ನಮಗೆ ನಿಮ್ಮ ಹಣ ಬೇಕಿಲ್ಲ ಎಂದು ಕಣ್ಣೀರು ಹಾಕುತ್ತಲೇ ಸಿದ್ದು ವಾಹನದತ್ತ ದುಡ್ಡು ಎಸೆದು ಆಕ್ರೋಶ ಹೊರಹಾಕಿದ್ದಾರೆ.
ಏನಿದು ಘಟನೆ?: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಜು.6ರಂದು ಗುಂಪು ಘರ್ಷಣೆ ಸಂಭವಿಸಿತ್ತು. ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅರುಣ ಕಟ್ಟಮನಿ ಸೇರಿ ನಾಲ್ವರು ಗಾಯಗೊಂಡಿದ್ದರು. ಘರ್ಷಣೆ ಬಳಿಕ ಮನೆಯ ಮೇಲೆ ದಾಳಿ ಹಾಗೂ ಜು.8ರಂದು ಡಾಬಾ ಮೇಲೆ ದಾಳಿ ನಡೆದು ಮಾರಣಾಂತಿಕ ಹಲ್ಲೆ ನಡೆದಿತ್ತು. ಇದರಲ್ಲಿ ಐವರು ಮುಸ್ಲಿಮರು ಗಾಯಗೊಂಡಿದ್ದರು. ಬಾಗಲಕೋಟೆ ಖಾಸಗಿ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಇವರನ್ನ ಭೇಟಿಯಾಗಲೆಂದು ಇಂದು(ಜು.15) ಸಿದ್ದರಾಮಯ್ಯ ಆಗಮಿಸಿದ್ದರು. ಆದರೆ, ಸಿದ್ದರಾಮಯ್ಯರ ಭೇಟಿಗೆ ನಿರಾಕರಿಸಿದ ಹಿಂದೂ ಜಾಗರಣ ವೇದಿಕೆ ಗಾಯಾಳುಗಳು, ಸಿದ್ದರಾಮಯ್ಯ ಬರುವುದು ಬೇಡ ಎಂದು ಬಾಗಲಕೋಟೆ ಎಸ್ಪಿಗೆ ಫೋನ್ ಮಾಡಿ ಮನವಿ ಮಾಡಿದ್ದರು. ಹಾಗಾಗಿ ಅಲ್ಲಿಗೆ ಹೋಗುವುದನ್ನ ಕೈಬಿಟ್ಟ ಸಿದ್ದರಾಮಯ್ಯ, ಮುಸ್ಲಿಂ ಗಾಯಾಳುಗಳನ್ನ ಆಸ್ಪತ್ರೆಯಲ್ಲಿ ಭೇಟಿಯಾದರು. ಆ ವೇಳೆ ಗಾಯಾಳುಗಳಾದ ಹನೀಫ್, ರಾಜೇಸಾಬ್, ರಫೀಕ್, ದಾವಲ್ ಮಲೀಕ್ ಅವರಿಗೆ ಪರಿಹಾರವೆಂದು ತಲಾ 50 ಸಾವಿರ ರೂ.ನಂತೆ ಅವರ ಸಂಬಂಧಿಕರಿಗೆ ಒಟ್ಟು 2 ಲಕ್ಷ ರೂಪಾಯಿ ಹಣ ನೀಡಲು ಮುಂದಾದರು.
ಬೇಡ ಎಂದು ನಿರಾಕರಿಸಿದರೂ ಒತ್ತಾಯವಾಗಿ ಸಿದ್ದರಾಮಯ್ಯ ಹಣ ನೀಡಿದ್ದರು. ವಾಪಸ್ ಹಣ ತೆಗೆದುಕೊಳ್ಳಿ ಎಂದು ಸಂಬಂಧಿಕರು ಹೇಳಿದರೂ ಸಿದ್ದರಾಮಯ್ಯ ಸುಮ್ಮನೆ ತೆರಳಿದರು. ಸಿಟ್ಟಾದ ರಜ್ಮಾ ಎಂಬಾಕೆ, ಹಿಂಬಾಲಿಕೊಂಡು ಬಂದು ‘ನಿಮ್ಮ ಹಣ ಬೇಡ, ನಮಗೆ ಶಾಂತಿ ಬೇಕು. ಭೀಕ್ಷೆ ಬೇಡಿ ಆಸ್ಪತ್ರೆ ಬಿಲ್ ಕಟ್ಟುತ್ತೇವೆ. ಹಿಂದೂ ಮುಸ್ಲಿಂ ಇಬ್ಬರೂ ನೆಮ್ಮದಿಯಿಂದ ಬದುಕುವ ವಾತಾವರಣ ಬೇಕು’ ಎಂದು ಆಕ್ರೋಶ ಹೊರಹಾಕಿದರು. ಸಿದ್ದರಾಮಯ್ಯ ವಾಹನ ಮುಂದಕ್ಕೆ ಹೋಗ್ತಿದ್ದಂತೆ ವಾಹನದತ್ತ ಹಣ ಎಸೆದರು. ಹಣ ಪೊಲೀಸ್ ಬೆಂಗಾವಲು ವಾಹನದತ್ತ ಬಿತ್ತು.
ಊರಿಗೆ ಹೋಗ್ಬೇಕಿತ್ತು.. ಅದ್ಕೆ ರಸ್ತೆಬದಿ ನಿಂತಿದ್ದ ಬಸ್ ಓಡಿಸಿಕೊಂಡು ಬಂದೆ… ಈತನ ಮಾತು ಕೇಳಿ ಮಾಲೀಕ ದಿಗ್ಭ್ರಾಂತ
ಮಾಡದ ತಪ್ಪಿಗೆ ಯುವಕ ಬಲಿ, ಪಿಎಸ್ಐ ಅಮಾನತು: ಮೃತದೇಹದ ಬಳಿ ಸಿಕ್ಕ ಕವರ್ನಲ್ಲಿದೆ ಮಹತ್ವದ ಸಾಕ್ಷ್ಯ