ಹೊಳೆಹೊನ್ನೂರು: ರಸ್ತೆಬದಿ ನಿಲ್ಲಿಸಿದ್ದ ಖಾಸಗಿ ಬಸ್ಸನ್ನು ವ್ಯಕ್ತಿಯೊಬ್ಬ ಚಾಲನೆ ಮಾಡಿಕೊಂಡು ಹೋಗಿ ಅವಾಂತರ ಸೃಷ್ಟಿಸಿದ್ದಾನೆ. ಆತನನ್ನು ಹಿಡಿದು ಪ್ರಶ್ನಿಸಿದರೆ ‘ಊರಿಗೆ ಹೋಗಬೇಕು, ಬಸ್ ನಿಂತಿತ್ತು ಓಡಿಸಿಕೊಂಡು ಬಂದೆ…’ ಎಂದಿದ್ದಾನೆ.
ಇಂತಹ ಘಟನೆ ನ್ಯಾಮತಿಯಲ್ಲಿ ಸಂಭವಿಸಿದೆ. ನ್ಯಾಮತಿಯ ಕರಿಬಸವ(35) ಬಸ್ ಚಲಾಯಿಸಿಕೊಂಡು ಹೋದ ಭೂಪ. ಈತ ನ್ಯಾಮತಿಯ ತರಕಾರಿ ಮಂಡಿಯೊಂದರಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ. ಕಳ್ಳತನದ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿ ಬಂದ ನಂತರ ಮಾನಸಿಕ ಅಸ್ವಸ್ಥನಾಗಿ ಊರೂರು ಅಲೆಯುತ್ತಿದ್ದಾನೆ. ಕರಿಬಸವನಿಗೆ ಪಾಲಕರಿಲ್ಲ. ಈತ ಊರಿಂದ ಊರಿಗೆ ಹೋಗುವಾಗ ರಸ್ತೆಬದಿ ನಿಲ್ಲಿಸಿದ ವಾಹನಗಳನ್ನು ತೆಗೆದುಕೊಂಡು ಪೆಟ್ರೋಲ್, ಡೀಸೆಲ್ ಖಾಲಿಯಾಗುವವರೆಗೂ ಓಡಿಸಿಕೊಂಡು ಹೋಗುವುದು ರೂಢಿ.
ಗುರುವಾರ ಭದ್ರಾವತಿ ತಾಲೂಕಿನ ಮಲ್ಲಾಪುರದಲ್ಲಿ ಮಾಲೀಕನ ಮನೆ ಮುಂಭಾಗದ ರಸ್ತೆಬದಿ ನಿಲ್ಲಿಸಿದ್ದ ಲವಕುಶ ಹೆಸರಿನ ಖಾಸಗಿ ಬಸ್ ಅನ್ನು ಚಲಾಯಿಸಿಕೊಂಡು ಕರಿಬಸವ ಹೋಗಿದ್ದಾನೆ. ಮಾಲೀಕ ರಫೀಕ್, ಅಲ್ಲೇ ರಸ್ತೆ ಬದಿಯ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಖರೀದಿಗೆ ಸರತಿಯಲ್ಲಿ ನಿಂತಾಗ ರಸ್ತೆಯಲ್ಲಿ ಆತನ ಬಸ್ ಬರುವುದನ್ನು ಕಂಡು ನಿಲ್ಲಿಸುವಂತೆ ಕೈ ಮಾಡಿದ್ದಾನೆ. ಆದರೂ ಕರಿಬಸವ ನಿಲ್ಲಿಸದೆ ಜೋರಾಗಿ ಹೋಗಿದ್ದಾನೆ. ರಫೀಕ್, ಬಸ್ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಮಂಗೋಟೆ ತಿರುವಿನ ಹಳ್ಳದ ಸೇತುವೆ ಮೇಲೆ ಎದುರಿನಿಂದ ಬರುತ್ತಿದ್ದ ಕಾರಿಗೆ ದಾರಿ ಬಿಡಲು ಕರಿಬಸವ ಬಸ್ ಅನ್ನು ನಿಧಾನವಾಗಿ ಚಲಾಯಿಸುವಾಗ ಬಸ್ ಹತ್ತಿದ ಮಾಲೀಕ, ತಡೆದು ವಿಚಾರಿಸಿದ್ದಾರೆ. ಊರಿಗೆ ಹೋಗಬೇಕು, ರಸ್ತೆ ಪಕ್ಕ ಬಸ್ ನಿಂತಿತ್ತು, ಓಡಿಸಿಕೊಂಡು ಬಂದೆ ಎಂದು ಕರಿಬಸವ ಹೇಳಿದ್ದಾನೆ. ಅಷ್ಟರಲ್ಲಿ ಜನ ಜಮಾಯಿಸಿ ಧರ್ಮದೇಟು ನೀಡಿ ಹೊಳೆಹೊನ್ನೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಕರಿಬಸವ ಮಾನಸಿಕ ಅಸ್ವಸ್ಥ ಎಂಬುದು ತಿಳಿದಿದೆ. ಆರೋಪಿಯು ಮಾನಸಿಕ ಅಸ್ವಸ್ಥ ಎಂದು ತಿಳಿದು ಬಸ್ ಮಾಲೀಕರು ದಿಗ್ಭ್ರಾಂತರಾಗಿದ್ದಾರೆ.
ಸಂತೆ ದಿನ ತಪ್ಪಿದ ಭಾರಿ ಅವಘಡ: ಕೆ.ಕೆ.ರಸ್ತೆಯಲ್ಲಿ ಬಸ್ ಓಡಿಸಿಕೊಂಡು ಹೋಗುವಾಗ ಮಳೆ ಬರುತ್ತಿದ್ದ ಕಾರಣ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರ ವಿರಳವಾಗಿತ್ತು. ಅಪ್ಪಿತಪ್ಪಿ ಕರಿಬಸವ ಬಸ್ ಚಲಾಯಿಸಿಕೊಂಡು ಆನವೇರಿ ತಲುಪಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಆನವೇರಿಯಲ್ಲಿ ಗುರುವಾರ ವಾರದ ಸಂತೆ ರಸ್ತೆಬದಿಯೇ ನಡೆಯುತ್ತೆ. ಸಂತೆ ವೇಳೆ ಬೈಕ್ನಲ್ಲಿ ಹೋಗುವುದಕ್ಕೂ ಸಾಧ್ಯವಾಗುವುದಿಲ್ಲ. ಮಲ್ಲಾಪುರದಿಂದ ಒಂದೆರಡು ಕಿಲೋಮೀಟರ್ ಚಲಾಯಿಸಿಕೊಂಡು ಹೋಗುವಷ್ಟರಲ್ಲಿ ಬಸ್ ತಡೆದಿದ್ದರಿಂದ ಸಂಭಾವ್ಯ ಅಪಘಾತ ತಪ್ಪಿದೆ.
ಶಿವಮೊಗ್ಗದಿಂದ ಬೈಕ್ ಕದ್ದು ಬಂದಿದ್ದ: ಕರಿಬಸವ ಹಂಪಿಯಲ್ಲಿರುವ ಅಕ್ಕನ ಮನೆಯಿಂದ ಶಿವಮೊಗ್ಗಕ್ಕೆ ಬಂದು ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್ವೊಂದನ್ನು ಚಲಾಯಿಸಿಕೊಂಡು ಚಿತ್ರದುರ್ಗ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೈಮರದಲ್ಲಿ ತಿರುವು ಪಡೆದು ಶ್ರೀನಿವಾಸಪುರದವರೆಗೆ ಬಂದಿದ್ದಾನೆ. ಶ್ರೀನಿವಾಸಪುರ ಬಳಿ ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾದ ಕಾರಣ ಅಲ್ಲೇ ರಸ್ತೆಬದಿ ನಿಲ್ಲಿಸಿ ಮಲ್ಲಾಪುರದವರೆಗೆ ನಡೆದುಕೊಂಡು ಹೋಗಿದ್ದಾನೆ. ಮಲ್ಲಾಪುರದಿಂದ ನ್ಯಾಮತಿಗೆ ಹೋಗಲು ರಸ್ತೆಬದಿ ನಿಂತಿದ್ದ ಖಾಸಗಿ ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ. ಬೈಕ್ ಅನ್ನು ಹೊಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾನಸಿಕ ಅಸ್ವಸ್ಥ ಕರಿಬಸವನನ್ನು ನ್ಯಾಮತಿಯ ಬಸ್ಗೆ ಹತ್ತಿಸಿ ಕಳಿಸಿ ಕೊಟ್ಟಿದ್ದಾರೆ.
ಮಾಡದ ತಪ್ಪಿಗೆ ಯುವಕ ಬಲಿ, ಪಿಎಸ್ಐ ಅಮಾನತು: ಮೃತದೇಹದ ಬಳಿ ಸಿಕ್ಕ ಕವರ್ನಲ್ಲಿದೆ ಮಹತ್ವದ ಸಾಕ್ಷ್ಯ
ದಾಂಡೇಲಿಯಲ್ಲಿ ಮಗನಿಂದಲೇ ತಾಯಿ ಮೇಲೆ ಅತ್ಯಾಚಾರ: ಒಂದೇ ದಿನ 2 ಬಾರಿ ಬಲತ್ಕಾರ