ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಸೋಮವಾರ ಪೊಲೀಸ್ ಬಂದೋಬಸ್ತ್ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅದ್ದೂರಿಯಾಗಿ ನೆರವೇರಿತು. ನಿರೀಕ್ಷೆಗೂ ಮೀರಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು. ಶಾಲಾ ಮಕ್ಕಳು ನಡೆಸಿಕೊಟ್ಟ ದೇಶಭಕ್ತಿ ಗೀತೆ ಗಾಯನ, ನೃತ್ಯ ಕಾರ್ಯಕ್ರಮಗಳು ಮನಸೆಳೆದವು.
ಬೆಳಗ್ಗೆ 8 ಗಂಟೆಗೆ ಕಂದಾಯ ಇಲಾಖೆ ಎಸಿ ಅವರು ಧ್ವಜಾರೋಹಣ ನೆರವೇರಿಸಿದರು. ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಾರ್ವಜನಿಕರು, ಮಕ್ಕಳು ಸೇರಿದಂತೆ ಎಲ್ಲರಿಗೂ ಲಾಡು, ಬಿಸ್ಕತ್, ಹೋಳಿಗೆಯನ್ನು ವಿತರಿಸಿ ಶುಭಕೋರುತ್ತಿದ್ದ ದೃಶ್ಯ ಕಂಡುಬಂತು. ಮತ್ತೊಂದೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು. ಅದೇ ವೇಳೆ ಚಾಮರಾಜಪೇಟೆ ಆಟದ ಮೈದಾನದ ರಸ್ತೆಯಲ್ಲಿ ಬೃಹತ್ ತಿರಂಗ ಹಿಡಿದು ನೂರಾರು ಮಂದಿ ಸಾಗಿದರು.\
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಚಾಮರಾಜಪೇಟೆ ಆಟದ ಮೈದಾನ ಮತ್ತು ಸುತ್ತಮುತ್ತ ಖಾಕಿ ಸರ್ಪಗಾವಲಿತ್ತು. ಓರ್ವ ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಮೂವರು ಡಿಸಿಪಿಗಳು, 6 ಎಸಿಪಿಗಳು, 15 ಇನ್ಸ್ಪೆಕ್ಟರ್ಗಳು, 45 ಸಬ್ಇನ್ಸ್ಪೆಕ್ಟರ್ಗಳು, ಐವರು ಮಹಿಳಾ ಪಿಎಸ್ಐಗಳು, 30 ಎಎಸ್ಐ, 300 ಕಾನ್ಸ್ಟೆಬಲ್, ಹೆಡ್ ಕಾನ್ಸ್ಟೆಬಲ್ ಹಾಗೂ 20 ಹೊಯ್ಸಳ, 5 ಕೆಎಸ್ಆರ್ಪಿ ತುಕಡಿ, 2 ಸಿಎಆರ್ ತುಕಡಿ, 1 ಆರ್ಎಫ್ಎ ಕಂಪನಿ ನಿಯೋಜನೆಯಾಗಿತ್ತು. ಸಿಸಿ ಕ್ಯಾಮರಾ ಅಳವಡಿಸಿದ್ದು, ಪ್ರತಿಯೊಬ್ಬರ ಮೇಲೆ ನಿಗಾ ವಹಿಸಲಾಯಿತು.
ಸ್ವಾತಂತ್ರ್ಯದ ಅಮೃತ ಮಹೋತ್ಸವ: ಪಂಚಪ್ರಾಣ ಸಂಕಲ್ಪಕ್ಕೆ ಕರೆ, ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ…
ಸಾಧನೆಯ ಅಮೃತ ಹಾದಿ: 75 ವರ್ಷಗಳ ಪ್ರಗತಿ ಸಾಕಷ್ಟು, ಸಾಧಿಸಬೇಕಾಗಿದೆ ಇನ್ನಷ್ಟು..