ಬೆಂಗಳೂರು: ನನ್ನ ಕಣ್ಣ ಮುಂದೆಯೇ ಅವನಿಗೆ ಶಿಕ್ಷೆ ಆಗಬೇಕು. ಅವನು ಅರೆಸ್ಟ್ ಆಗಿದ್ದಾನಲ್ವಾ? ಅವನಿಗೆ ನನ್ನ ಕಣ್ಣ ಮುಂದೆಯೇ ಶಿಕ್ಷೆ ಕೊಡಬೇಕು… ಇದು ಆ್ಯಸಿಡ್ ದಾಳಿಗೆ ಒಳಗಾಗಿ ಸಾವು-ಬದುಕಿನ ನಡುವೆ ಹೊರಾಡುತ್ತಿರುವ ಯುವತಿಯ ಆಕ್ರೋಶದ ಧ್ವನಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಬಾಯ್ಬಿಟ್ರೆ ಹೇಳ್ತಿರೋದು ಒಂದೇ ಮಾತು… ಅವನಿಗೆ ನನ್ ಕಣ್ಮುಂದೆಯೇ ಶಿಕ್ಷೆ ಆಗಬೇಕು ಎಂದು.
ಪ್ರೀತಿಸಲು ಒಲ್ಲೆ ಎಂದ 24 ವರ್ಷದ ಯುವತಿ ಮೇಲೆ ಏ.28ರ ಗುರುವಾರ ಬೆಳಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್ ಬಳಿ ಭಗ್ನಪ್ರೇಮಿ ನಾಗೇಶ್ ಆ್ಯಸಿಡ್ ಹಾಕಿ ಪರಾರಿಯಾಗಿದ್ದ. ಸ್ವಾಮೀಜಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್ 16 ದಿನಗಳ ಬಳಿಕ ತಮಿಳುನಾಡಿನಲ್ಲಿ ನಿನ್ನೆ(ಮೇ 13) ಸಿಕ್ಕಿಬಿದ್ದಿದ್ದಾನೆ. ಆತನ ತಪ್ಪಿಸಿಕೊಳ್ಳಲು ಯತ್ನಿಸಿದ ಆ್ಯಸಿಡ್ ದಾಳಿಕೋರನ ಕಾಲಿಗೆ ಗುಂಡು ಹಾರಿಸಿ ಆತನನ್ನು ಪೊಲೀಸರು ಬಂಧಿಸಿ ಕರೆ ತಂದಿದ್ದಾರೆ.
ಅತ್ತ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಯುವತಿ, ಅಮ್ಮ ನನ್ನನ್ನು ಬದುಕಿಸಿಕೋ… ಅವನಿಗೆ ನನ್ನ ಕಣ್ಮುಂದೆಯೇ ಶಿಕ್ಷೆ ಆಗ್ಬೇಕು ಅಮ್ಮ.. ಎಂದು ಆಸ್ಪತ್ರೆ ಬೆಡ್ ಮೇಲೆಯೇ ಕನವರಿಸುತ್ತಿದ್ದಾಳೆ. ಯುವತಿಯ ದಯನೀಯ ಸ್ಥಿತಿ ನೋಡಿದ್ರೆ ಕರುಳು ಚುರ್ ಅನ್ನುತ್ತೆ.
ಯುವತಿಯ ರೋಗ್ಯ ವಿಚಾರಿಸಲು ತೆರಳಿದ್ದ ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರಿಗೂ ಮನವಿ ಮಾಡಿದ ಯುವತಿ, ಸರ್ ಅವನಿಗೆ ನನ್ನ ಕಣ್ಣ ಮುಂದೆಯೇ ಶಿಕ್ಷೆ ಆಗಬೇಕು ಎಂದಿದ್ದಳು.
ತಮಿಳುನಾಡಿನಲ್ಲಿ ಅಡಗಿದ್ದ ಕಿರಾತಕನನ್ನು ನಮ್ಮ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಪೊಲೀಸರು ನಮ್ಮ ಪೊಲೀಸರಿಗೆ ಸಹಕಾರ ನೀಡಿದ್ದಾರೆ. ಆರೋಪಿಗೆ ತಕ್ಕ ಶಿಕ್ಷೆಯಾಗುವಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ. ಯುವತಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲಾಗುತ್ತೆ. ಯುವತಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಆ್ಯಸಿಡ್ ದಾಳಿಕೋರ ನಾಗೇಶ್ ಬಂಧನ: ಸ್ವಾಮೀಜಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ