ಹಗರಿಬೊಮ್ಮನಹಳ್ಳಿ: ನ್ಯಾ.ಎಚ್.ಎನ್.ನಾಗಮೋಹನದಾಸ್ ಆಯೋಗದ ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ ಕುರಿತು ಅಧಿವೇಶನದಲ್ಲಿ ಚರ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ಪದಾಧಿಕಾರಿಗಳು ಶುಕ್ರವಾರ ಪಟ್ಟಣದಲ್ಲಿ ಶಾಸಕ ಎಸ್.ಭೀಮಾನಾಯ್ಕಗೆ ಮನವಿ ಸಲ್ಲಿಸಿದರು.
ಸಂಚಾಲಕಿ ಬಿ.ಮಾಳಮ್ಮ ಮಾತನಾಡಿ, ಸೆ.21ರಂದು ನಡೆಯುವ ಅಧಿವೇಶನದಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಬೇಕು. ರಾಜ್ಯ ಸರ್ಕಾರ ಶೇ.7.5ಕ್ಕೆ ಮೀಸಲು ಹೆಚ್ಚಿಸಿ ಮಹರ್ಷಿ ವಾಲ್ಮೀಕಿ ಜಯಂತಿಯೊಳಗೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಶಾಸಕ ಭೀಮಾನಾಯ್ಕ ಮಾತನಾಡಿ, ನ್ಯಾ.ನಾಗಮೋಹನದಾಸ್ ಆಯೋಗದಂತೆ ಮೀಸಲು ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇನೆ. ಕರೊನಾ ನೆಪದಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ. ಬಜೆಟ್ನಲ್ಲಿ ಅನುದಾನ ಸಿಕ್ಕರೂ, ಟೆಂಡರ್ ಆಗುತ್ತಿಲ್ಲ ಎಂದರು. ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಸಂಘಟನೆಯ ಆರ್.ಎಸ್.ಬಸವರಾಜ, ಎಸ್.ಜಗನ್ನಾಥ, ಬಸವರಾಜ ಗುಳೆದಾಳು, ಎಂ.ಆನಂದ, ಕೆ.ರಾಮಣ್ಣ, ಎಸ್.ದುರುಗಪ್ಪ, ದೊಡ್ಡತಿಂದಪ್ಪ, ಯಮುನಪ್ಪ, ಅಡವಿಸ್ವಾಮಿ, ಹನುಮಕ್ಕ ಇತರರಿದ್ದರು.