ನವದೆಹಲಿ: ಕರೊನಾ ವೈರಸ್ ಭೀತಿಯಿಂದಾಗಿ ಇಡೀ ದೇಶವೇ ಲಾಕ್ಡೌನ್ ಬಲೆಯಲ್ಲಿ ಸಿಲುಕಿದೆ. ಇದು ಬಹುತೇಕ ಮಂದಿಗೆ ಜೀವನ, ಕೌಟುಂಬಿಕ ಮೌಲ್ಯ ಸೇರಿದಂತೆ ಇನ್ನಿತರ ಪಾಠ ಕಲಿಸಿರುವುದಂತು ಸುಳ್ಳಲ್ಲ. ಲಾಕ್ಡೌನ್ನಿಂದಾಗಿ ಭಾರತೀಯ ಕ್ರೀಡಾ ವಲಯ ಕೂಡ ನಿಂತ ನೀರಾಗಿತ್ತು. ಕೆಲ ಅಥ್ಲೀಟ್ಗಳು ರಾಷ್ಟ್ರೀಯ ಶಿಬಿರಗಳಲ್ಲೇ ಬಾಕಿಯಾಗಿದ್ದರು. ಅತ್ತ ಮನೆಗೂ ತೆರಳಲು ಸಾಧ್ಯವಾಗದೇ, ಇತ್ತ ಅಭ್ಯಾಸವನ್ನು ಮಾಡಲು ಸಾಧ್ಯವಾಗದೆ ಹಾಸ್ಟೆಲ್ನಲ್ಲೇ ಅಥ್ಲೀಟ್ಗಳು ಲಾಕ್ ಆಗಿದ್ದರು. ಈ ವೇಳೆ ಫಿಟ್ನೆಸ್, ಯೋಗ ಮೊರೆ ಹೋದವರೇ ಜಾಸ್ತಿ. ಈ ಅವಧಿಯನ್ನು ಸೂಕ್ತವಾಗಿ ಬಳಸಿಕೊಂಡ ಸ್ಟಾರ್ ಅಥ್ಲೀಟ್ ಹಿಮಾದಾಸ್ ಅಡುಗೆ ಮಾಡುವುದನ್ನು ಕಲಿತುಕೊಂಡರಂತೆ.
ಇದನ್ನೂ ಓದಿ: ನೂರಾರು ಬೀದಿನಾಯಿಗಳಿಗೆ ಹಾಕಿ ಆಟಗಾರ ಆಸರೆ
ಪಟಿಯಾಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (ಎನ್ಐಎಸ್) ಕೇಂದ್ರದಲ್ಲಿ ಬಂಧಿಯಾಗಿದ್ದ ಹಿಮಾ ದಾಸ್ ಸೇರಿದಂತೆ ಇನ್ನಿತರ ಅಥ್ಲೀಟ್ಗಳು ಮಂಗಳವಾರದಿಂದ ಅಭ್ಯಾಸ ಆರಂಭಿಸಿದ್ದಾರೆ. ಈ ವೇಳೆ ಲಾಕ್ಡೌನ್ ಅನುಭವವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಹಿಮಾ ದಾಸ್, ಪೇಟಿಂಗ್, ಅಡುಗೆ ಮಾಡುವುದು, ಯೋಗ ಮಾಡುವುದೇ ಅವರ ದೈನಂದಿನ ಕೆಲಸವಾಗಿತ್ತಂತೆ. ಯಾರ ಸಹಾಯ, ಸಲಹೆ ಇಲ್ಲದೇ ಹಿಮಾ ದಾಸ್ ಫಿಟ್ನೆಸ್ಗಾಗಿ ದೈಹಿಕ ಕಸರತ್ತಿನಲ್ಲಿ ತೊಡಗಿದ್ದರಂತೆ. ಲಾಕ್ಡೌನ್ನಲ್ಲಿ ಅಡುಗೆ, ಚಿತ್ರಕಲೆ, ಧ್ಯಾನ ಹಾಗೂ ಯೋಗವೇ ದೈನಂದಿನ ಚಟುವಟಿಕೆಯಾಗಿತ್ತು ಎನ್ನುತ್ತಾರೆ ಹಿಮಾದಾಸ್. ಟ್ವಿಟರ್ನಲ್ಲಿ ನಡೆದ ಪ್ರಶ್ನೋತ್ತರದ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ 20 ವರ್ಷದ ಹಿಮಾ ದಾಸ್ ಉತ್ತರಿಸಿದ್ದಾರೆ. ಪ್ರತಿದಿನ 6 ಗಂಟೆಗಳ ಕಾಲ ಈ ಕಸರತ್ತಿನಲ್ಲಿ ತೊಡಗಿದ್ದೆ ಎಂದಿದ್ದಾರೆ.
ಇದನ್ನೂ ಓದಿ:ವಿಶ್ವಕಪ್ನಲ್ಲಿ ಧೋನಿಗೆ ಗೆಲುವಿನ ಆಸೆಯೇ ಇರಲಿಲ್ಲ, ಸ್ಟೋಕ್ಸ್ ಬೌನ್ಸರ್!
ಒಲಿಂಪಿಕ್ಸ್ನಲ್ಲಿ ಪದಕದ ಗುರಿ
ಎರಡು ತಿಂಗಳ ಕಾಲ ಟ್ರ್ಯಾಕ್ನಿಂದ ದೂರ ಉಳಿದ್ದೆ, ಫಿಸಿಯೋ, ಕೋಚ್ ಮಾರ್ಗದರ್ಶನದಲ್ಲಿ ತರಬೇತಿ ಆರಂಭಿಸಲಾಗುವುದು ಎಂದಿದ್ದಾರೆ. ಮುಂಬರುವ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪದಕ ಜಯಿಸುವುದೇ ನನ್ನ ಗುರಿ ಎಂದಿರುವ ಹಿಮಾ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರೇ ನನಗೆ ಮಾದರಿ ಎಂದು ಹೇಳಿಕೊಂಡಿದ್ದಾರೆ. ನನ್ನ ಮೊದಲ ತಿಂಗಳ ಸಂಬಳವನ್ನು ತಂದೆಗೆ ನೀಡಿದ್ದು ಜೀವನದ ಅವಿಸ್ಮರಣೀಯ ಕ್ಷಣ ಎಂದಿದ್ದಾರೆ. 2018ರಲ್ಲಿ ಫಿನ್ಲ್ಯಾಂಡ್ನಲ್ಲಿ ನಡೆದ ವಿಶ್ವ ಜೂನಿಯರ್ (20 ವಯೋಮಿತಿ) ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ 400 ಮೀಟರ್ ಓಟದಲ್ಲಿ ಹಿಮಾ ದಾಸ್ ಸ್ವರ್ಣ ಗೆದ್ದಿದ್ದರು. ಬಳಿಕ 2018ರ ಜಕಾರ್ತ ಏಷ್ಯಾಡ್ನಲ್ಲಿ ಮಹಿಳೆಯರ 4/400 ಮೀಟರ್ ರಿಲೇ ಹಾಗೂ ಮಿಶ್ರ ರಿಲೇಯಲ್ಲಿ ಸ್ವರ್ಣ ಗೆದ್ದ ಭಾರತ ತಂಡದ ಸದಸ್ಯೆಯಾಗಿದ್ದರು.